ಅರಸೀಕೆರೆ: ಸಾಂಪ್ರದಾಯಿಕ ಕುಲ ಕಸುಬುಗಳು ಇಂದು ಮರೆಯಾ ಗುತ್ತಿವೆ. ಇದರ ನಡುವೆ ಕೆಲವರು ಕುಲ ಕಸುಬನ್ನೇ ಉದ್ಯಮವನ್ನಾಗಿ ಬೆಳೆಸಿ ಜೀವನ ಸಾಗಿಸುತ್ತಾ ಆರ್ಥಿಕ ವಾಗಿ ಉನ್ನತಿ ಹೊಂದಿದವರೂ ಇದ್ದಾರೆ.
ಆದರೆ ಸುಣ್ಣಗಾರರ ಬದುಕು ಮಾತ್ರ ಸುಣ್ಣದ ಬಟ್ಟಿಯಲ್ಲಿ ಬೆಂದಿದೆ. ಇದೇ ಉದ್ಯೋಗ ನಂಬಿಕೊಂಡು ಜೀವನ ಸಾಗಿಸುತ್ತಿರುವರ ಬದುಕು ಅತಂತ್ರ ವಾಗಿದೆ.
ತಾಲ್ಲೂಕಿನಲ್ಲಿ ಕಣಕಟ್ಟೆ, ಹಾರನ ಹಳ್ಳಿ, ಅಗ್ಗುಂದ, ಬಾಗೇಶಪುರ ಮುಂತಾದ ಗ್ರಾಮಗಳಲ್ಲಿ ಸುಣ್ಣ ತಯಾರಿಸುವರು ಹಿಂದುಳಿದ ವರ್ಗಕ್ಕೆ ಸೇರಿದ ಸುಣ್ಣಗಾರರು. ಇವರು ಇದೇ ವೃತ್ತಿಯನ್ನು ನಂಬಿ ಜೀವನ ಸಾಗಿಸು ತ್ತಿದ್ದಾರೆ. ಆದರೆ ಕಾಲ ಬದಲಾದಂತೆ ವೃತ್ತಿ ಇವರಿಗೆ ಹೊರೆಯಾಗಿದೆ. ಮೊದಲು ಸುಣ್ಣ ತಯಾರಿಸಲು ಬೇಕಾದ ಕಚ್ಚಾ ವಸ್ತು ಹುರುಕು ಕಲ್ಲುಗಳನ್ನು ತರುತ್ತಾರೆ. ಒಂದು ಟ್ರ್ಯಾಕ್ಟರ್ ಕಲ್ಲಿಗೆ 1,200 ರೂಪಾಯಿ, ಅದನ್ನು ಬಟ್ಟಿಗೆ ಹಾಕಿ ಸುಡಲು ತೆಂಗಿನ ಚಿಪ್ಪು ಅಥವಾ ಸೌದೆ ಬೇಕು. ಒಂದು ಸಾವಿರ ತೆಂಗಿನ ಚಿಪ್ಪಿಗೆ 750 ರೂಪಾಯಿ. ಹೀಗೆ ಪ್ರತಿಯೊಂದು ಕಚ್ಚಾ ವಸ್ತುವಿನ ದರ ಏರಿಕೆಯಿಂದ ಸುಣ್ಣ ಸುಡುವವರೇ ಕಡಿಮೆಯಾಗಿದ್ದಾರೆ.
ಈಗ ಮನೆಗಳಿಗೆ ಯಾರೂ ಸುಣ್ಣ ಬಳಿಯುತ್ತಿಲ್ಲ. ಎಲ್ಲರೂ ಪೇಯಿಂಟ್ಗೆ ಮೊರೆ ಹೋಗಿದ್ದಾರೆ. ಇದರ ಮಧ್ಯ ದಲ್ಲೂ ಸುಣ್ಣ ತಯಾರಿಕೆಯನ್ನು ಒಂದು ಉದ್ಯಮ ಎಂದು ನಂಬಿ, ಆ ವೃತ್ತಿಯಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಬದುಕು ಸಾಗಿಸಬಹುದು ಎನ್ನುವುದನ್ನು ಕಣಕಟ್ಟೆ ವಾಸಿಗಳಾದ ರಾಮಣ್ಣ ಮತ್ತು ಸ್ವಾಮಣ್ಣ ಕುಟುಂಬದವರು ಸಾಧಿಸಿ ತೋರಿಸಿದ್ದಾರೆ. ಮಾಡಾಳು- ಕಣಕಟ್ಟೆ ರಸ್ತೆಬದಿ ಸುಣ್ಣ ತಯಾರಿಕೆ ಗೂಡು ನಿರ್ಮಿಸಿ ಅದರ ಮೂಲಕವೇ ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತ ಸ್ವಾವಲಂಬಿ ಬದುಕು ಕಟ್ಟಿಕೊಂಡವರು. ಅವರಿಗೆ ಎಷ್ಟೇ ತೊಂದರೆ ಎದುರಾದರೂ ಸರಿ ತಮ್ಮ ಕುಲ ಕಸುಬಾದ ಸುಣ್ಣದ ಉದ್ಯಮ ತಮ್ಮನ್ನು ಕೈಬಿಡದು ಎನಿಸಿತು.
ಆಗಾಗ ಎದುರಾದ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುತ್ತಾ ಈ ವೃತ್ತಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ಇತ್ತೀಚೆಗೆ ನಾನಾ ತರದ ರಾಸಾಯನಿಕ ಬಣ್ಣ ಮಾರುಕಟ್ಟೆಗೆ ದಾಳಿಯಿಟ್ಟರೂ ಬಡವರ ಮನೆ ಅಂದ ಹಾಗೂ ಸುಂದರಗೊಳಿಸುವ ಸುಣ್ಣಕ್ಕೆ ಬೇಡಿಕೆ ಮಾತ್ರ ಕುಸಿದಿಲ್ಲ ಎಂದು ಇವರು ಹೇಳುತ್ತಾರೆ. ಕಾಫಿ ಗಿಡಕ್ಕೆ ತಗಲುವ ಕಾಂಡಕೊರಕ ಕ್ರಿಮಿಗಳ ನಾಶಕ್ಕೆ ಸುಣ್ಣದ ಪುಡಿ ರಾಮಬಾಣ, ರೋಗ ಕಾಣಿಸಿಕೊಂಡ ಕೂಡಲೇ ಕಾಫಿ ತೋಟದ ಮಾಲೀಕರು ಇತ್ತ ಧಾವಿಸಿ ಸುಣ್ಣ ಖರೀದಿಸುತ್ತಾರೆ ಎನ್ನುತ್ತಾರೆ.
ಬಣ್ಣ ಬಳಿಯಲು ಸುಣ್ಣ ಬೇಡವಾಗಿದ್ದರೂ ಕೃಷಿ ಮತ್ತಿತರ ಹಲವು ಕ್ಷೇತ್ರಗಳಲ್ಲಿ ಸುಣ್ಣದ ಬೇಡಿಕೆ ಈಗಲೂ ಇದೆ. ಗುಡಿ ಕೈಗಾರಿಕೆಯ ರೂಪದಲ್ಲಿ ಈ ಉದ್ಯಮಕ್ಕೇ ಸರ್ಕಾರ ಬೆಂಬಲ ನೀಡಬೇಕು ಎಂಬುದು ಈ ಉದ್ಯಮದಲ್ಲಿ ತೊಡಗಿರುವವರ ಆಸೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.