ಮೈಸೂರು: -ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸೇವೆ ಒದಗಿಸುವ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಸಾರ್ವತ್ರಿಕ ಆರೋಗ್ಯ ಸುಧಾರಣಾ ಯೋಜನೆಯ ಮಾದರಿ ಅನುಷ್ಠಾನಕ್ಕೆ ಮೈಸೂರು ಜಿಲ್ಲೆ ಆಯ್ಕೆಯಾಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನ್ಗೋಪಾಲ್ ಈ ವಿಷಯ ತಿಳಿಸಿದರು.
ಆರೋಗ್ಯ ಸೇವೆಯಲ್ಲಿ ವಿಭಿನ್ನ ಸ್ಥಾನದಲ್ಲಿರುವ ರಾಯಚೂರು, ಮೈಸೂರು ಜಿಲ್ಲೆಗಳನ್ನು ಪೈಲಟ್ ಯೋಜನೆಗೆ ಆಯ್ಕೆ ಮಾಡಲಾಗಿದೆ. ದೇಶದಲ್ಲಿಯೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಯೋಜನಾ ಆಯೋಗ ಕೂಡ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
ಆರೋಗ್ಯ ಮತ್ತು ಶಿಕ್ಷಣದಂತಹ ಕ್ಷೇತ್ರದಲ್ಲಿ ತೊಡಗಿಸುವ ಬಂಡವಾಳ ರಾಷ್ಟ್ರಮಟ್ಟದ ನೂತನ ಸಂಪನ್ಮೂಲದ ಅಭಿವೃದ್ಧಿಗೆ ನೆರವಾಗುತ್ತದೆ. ಸಮಾಜದ ತಳ ಹಂತದಲ್ಲಿರುವ ವ್ಯಕ್ತಿ ಕೂಡ ಅತ್ಯುತ್ತಮ ಆರೋಗ್ಯ ಸೌಲಭ್ಯ ಪಡೆಯುವಂತಾಗಬೇಕು ಎಂಬ ಆಶಯದಿಂದ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಸ್ತುತ ಜಾರಿಯಲ್ಲಿರುವ ವಿವಿಧ ಆರೋಗ್ಯ ಯೋಜನೆಗಳಾದ ಯಶಸ್ವಿನಿ, ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆ, ಮೊದಲಾದ ಸೇವೆಗಳಿಂದ ವಂಚಿತರಾದ ಜನರಿಗೂ ಆರೋಗ್ಯ ಸೇವೆಗಳು ದೊರೆಯಬೇಕು. ಖಾಸಗಿ ಸಾರ್ವಜನಿಕ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಯೋಜನೆ ಜಾರಿಗೊಳಿಸುತ್ತವೆ ಎಂದರು.
ದೆಹಲಿಯಿಂದ ಆಗಮಿಸಿದ್ದ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಸುನೀಲ್ ನಂದನ್ ಯೋಜನೆಯ ರೂಪುರೇಷೆಗಳನ್ನು ವಿವರಿಸಿದರು. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ನಿರ್ದೇಶಕ ಡಾ. ಸುರೇಶ್ ಕೆ., ಮೆಹಮೂದ್, ಅಭಿಯಾನದ ಆಡಳಿತ ನಿರ್ದೇಶಕಿ ಡಾ. ಸಾಧನಾ, ಜಿಲ್ಲಾಧಿಕಾರಿ ಸಿ. ಶಿಖಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಾಲೇಗೌಡ, ವಿವೇಕಾನಂದ ಯೂತ್ ಮೂವ್ಮೆಂಟ್ನ ಸಂಸ್ಥಾಪಕ ಅಧ್ಯಕ್ಷ ಡಾ.ಬಾಲಸುಬ್ರಹ್ಮಣ್ಯಂ ಭಾಗವಹಿಸಿದ್ದರು.