ಶಿಡ್ಲಘಟ್ಟ: ಮಹಿಳೆಯರು ಅಕ್ಷರಸ್ಥರಾಗಿ ಸುತ್ತಮುತ್ತಲಿನ ಆಗು ಹೋಗುಗಳಿಗೆ ಸ್ಪಂದಿಸುವಂತಾದರೆ ಸಮಾಜವು ಚೈತನ್ಯಯುತವಾಗುವುದು. ಈ ನಿಟ್ಟಿನಲ್ಲಿ ಶಿಕ್ಷಣ ಅಗತ್ಯ ಎಂದು ಪ್ರಾಧ್ಯಾಪಕ ಕೋಡಿರಂಗಪ್ಪ ಅಭಿಪ್ರಾಯಪಟ್ಟರು.ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಶುಕ್ರವಾರ ತಾಲ್ಲೂಕು ಲೋಕಶಿಕ್ಷಣ ಸಮಿತಿ ವತಿಯಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಸಾಕ್ಷರ್ ಭಾರತ್-2012 ಯೋಜನೆಯ ಮಹತ್ವದ ಕುರಿತು ಆಯೋಜಿಸಿದ್ದ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದರೂ ಸಾಕ್ಷರತಾ ಪ್ರಮಾಣ ಕೇವಲ ಶೇ.65 ಮಾತ್ರ ಇರುವುದು ದುರಂತ. ಸ್ಥಳೀಯ ಜನ ಪ್ರತಿನಿಧಿಗಳು ಅಕ್ಷರಸ್ಥರಾಗಿ ಕಾನೂನಿನ ಅರಿವು ಪಡೆದು ಸಂವಿಧಾನತ್ಮಕ ಹಕ್ಕು ಚಲಾಯಿಸಿದಾಗ ಪಾರದರ್ಶಕ ಆಡಳಿತ ದೊರೆಯಲು ಸಾಧ್ಯ ಎಂದರು.
ವಯಸ್ಕರ ಶಿಕ್ಷಣ ಸಮಿತಿಯ ಜಿಲ್ಲಾ ಅಧಿಕಾರಿ ನಾಝ್ಾಪಾರ್ಸಾ ಮಾತನಾಡಿ, ಸಾಕ್ಷರ್ ಭಾರತ್-ಯೋಜನೆಯನ್ನು ಸದುಪಯೋಗ ಪಡಿಸಿಕೊಂಡರೆ ಸಾಮಾಜಿಕ ಜೀವನ ಸುಧಾರಣೆ ಸಾಧ್ಯವಿದೆ ಎಂದರು.
ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿ ಕೆ.ವಿ.ಅಮರನಾಥ್, ಪ್ರೇರಕ ಕ್ಯಾತಪ್ಪ, ಜಿಲ್ಲಾ ಲೋಕ ಶಿಕ್ಷಣ ಸಮಿತಿಯ ಸಹಾಯಕ ಅಧಿಕಾರಿ ದಸ್ತಗೀರ್ಸಾಬ್, ತಾಲ್ಲೂಕು ಸಾಕ್ಷರತಾ ಸಂಯೋಜನಾಧಿಕಾರಿ ಮಂಜುನಾಥ್, ಶಿವಪ್ಪ ಹಾಗೂ ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಜರಿದ್ದರು.