ನವದೆಹಲಿ (ಪಿಟಿಐ): ವೋಟಿಗಾಗಿ ನೋಟು ಪ್ರಕರಣದ ಆರೋಪಿ ಸುಧೀಂದ್ರ ಕುಲಕರ್ಣಿ ಅವರಿಗೆ ಜಾಮೀನು ನೀಡಲು ದೆಹಲಿ ನ್ಯಾಯಾಲಯ ನಿರಾಕರಿಸಿದೆ.
ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಆಪ್ತರಾಗಿದ್ದ ಕುಲಕರ್ಣಿ ಜತೆಗೆ ಇಬ್ಬರು ಮಾಜಿ ಸಂಸದರಾದ ಫಗ್ಗನ್ ಸಿಂಗ್ ಕುಲಸ್ತೆ ಮತ್ತು ಮಹಾವೀರ್ ಸಿಂಗ್ ಭಗೋರ ಅವರಿಗೂ ಕೋರ್ಟ್ ಜಾಮೀನು ನಿರಾಕರಿಸಿದೆ.
ಲಂಚ ತೆಗೆದುಕೊಂಡ ನಂತರ ಸಂಬಂಧಿಸಿದ ಯಾವುದಾದರೊಂದು ತನಿಖಾ ಸಂಸ್ಥೆಗೆ ಹಗರಣ ಕುರಿತು ತಿಳಿಸಲು ಆರೋಪಿಗಳಿಗೆ ಸಾಕಷ್ಟು ಸಮಯಾವಕಾಶ ಇತ್ತು. ಹಾಗೆ ಮಾಡದ ಮೂಲಕ ಆರೋಪಿಗಳು ಗಂಭೀರ ಅಪರಾಧ ಎಸಗಿದ್ದಾರೆ ಎಂದು ನ್ಯಾಯಾಧೀಶೆ ಸಂಗೀತಾ ದಿಂಗ್ರಾ ಸೆಹಗಲ್ ಹೇಳಿದರು.
ಕುಲಕರ್ಣಿ ಈ ಹಗರಣದ ಸೂತ್ರಧಾರರು. ಪಿತೂರಿದಾರರೊಂದಿಗೆ ಅವರು ನಿರಂತರ ಸಂಪರ್ಕದಲ್ಲಿದ್ದರು. ಬಿಜೆಪಿ ಸಂಸದರಿಗೆ ಲಂಚ ನೀಡಿದಾಗಲೂ ಅವರು ಉಪಸ್ಥಿತರಿದ್ದರು ಎಂದು ದೆಹಲಿ ಅಪರಾಧ ವಿಭಾಗ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು.
ಭಾರತೀಯ ದಂಡ ಸಂಹಿತೆಯ 120-ಬಿ ಕಲಂ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಕುಲಕರ್ಣಿ ವಿರುದ್ಧ ಆರೋಪ ದಾಖಲಾಗಿದೆ.