ಹೈದರಾಬಾದ್: ಭಾರತೀಯ ಸಾಗರ ಮಾಹಿತಿ ಸೇವಾ ಕೇಂದ್ರದ ಆಶ್ರಯದಲ್ಲಿ ಬುಧವಾರ ಇಲ್ಲಿ ಅಣಕು ಸುನಾಮಿ ಕಾರ್ಯಾಚರಣೆ ನಡೆಸಿ ರಕ್ಷಣಾ ತಂಡಗಳ ಸಾಮರ್ಥ್ಯವನ್ನು ಒರೆಗೆ ಹಚ್ಚಲಾಯಿತು.
ಇಂಡೊನೇಷ್ಯಾದ ಸುಮಾತ್ರಾ ದ್ವೀಪದ ವಾಯವ್ಯ ಕಡಲಿನ 10 ಕಿ.ಮೀ ಆಳದಲ್ಲಿ 9.2 ತೀವ್ರತೆಯ ಭೂಕಂಪ ಸಂಭವಿಸಿ ದೈತ್ಯ ಸುನಾಮಿ ಅಲೆಗಳು ಸಂಜೆ 6.30ಕ್ಕೆ ಅಪ್ಪಳಿಸಿದ ಸುದ್ದಿ ತಿಳಿದದ್ದೇ ರಕ್ಷಣಾ ತಂಡಗಳು ಕಡಲ ತೀರಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದವು. ಈ ದೈತ್ಯ ಸುನಾಮಿ ಅಲೆಗಳು ಹಿಂದೂ ಮಹಾಸಾಗರದಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸಿ 12 ಗಂಟೆಗಳಲ್ಲಿ ದಕ್ಷಿಣ ಆಫ್ರಿಕಾದ ಕಡಲ ತೀರದಲ್ಲೂ ಹಾವಳಿ ಎಬ್ಬಿಸಿದವು- ಇಂತಹ ಅಣಕು ಸುನಾಮಿ ಅವಘಡದ ಕಾರ್ಯಾಚರಣೆಯಲ್ಲಿ ಇದೇ ಮೊದಲ ಬಾರಿಗೆ 23 ರಾಷ್ಟ್ರಗಳು ಪಾಲ್ಗೊಂಡಿದ್ದವು.
ಈ ಸಂದರ್ಭದಲ್ಲಿ ಜಿಟಿಎಸ್, ಇ-ಮೇಲ್, ಫ್ಯಾಕ್ಸ್, ಎಸ್ಎಂಎಸ್ ಮತ್ತು ವೆಬ್ಗಳ ಮೂಲಕ 15 ತುರ್ತು ಸಂದೇಶಗಳನ್ನು ರವಾನಿಸಿ ಅದಕ್ಕೆ ಪ್ರತಿಕ್ರಿಯೆ ವ್ಯಕ್ತವಾದ ರೀತಿಯನ್ನು ದಾಖಲಿಸಿಕೊಳ್ಳಲಾಯಿತು.