ಬೆಂಗಳೂರು: ಕನ್ನಡತಿಯರಾದ ತಮಿಳ್ ಸೆಲ್ವಿ ಮತ್ತು ಸುನೀತಾ ಬಾಯಿ ಅವರ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2011ನೇ ಸಾಲಿನ ಅನುವಾದ ಸಾಹಿತ್ಯ ಪುರಸ್ಕಾರ ಲಭಿಸಿದೆ.
ತಮಿಳ್ ಸೆಲ್ವಿ ಅವರು ತಮಿಳಿನಿಂದ ಕನ್ನಡಕ್ಕೆ ಅನುವಾದಿಸಿರುವ `ನಾನು ಅವನಲ್ಲ... ಅವಳು~ ಕೃತಿ ಮತ್ತು ಡಾ.ಎಲ್.ಸುನೀತಾ ಬಾಯಿ ಅವರು ಕನ್ನಡದಿಂದ ಕೊಂಕಣಿಗೆ ಅನುವಾದಿಸಿರುವ `ಮಹಾಕವಿ ಗೋವಿಂದ ಪೈ~ ಕೃತಿಯು ಪುರಸ್ಕಾರಕ್ಕೆ ಪಾತ್ರವಾಗಿದೆ.
ಪ್ರಶಸ್ತಿಯು ತಾಮ್ರ ಫಲಕ ಮತ್ತು 50 ಸಾವಿರ ರೂಪಾಯಿ ನಗದನ್ನು ಒಳಗೊಂಡಿದ್ದು, ಆಗಸ್ಟ್ನಲ್ಲಿ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದೆ.
ಕನ್ನಡಕ್ಕೆ ಅನುವಾದಿತಗೊಂಡ ಈ ಕೃತಿಯನ್ನು ಡಾ.ನಾ.ದಾಮೋದರ ಶೆಟ್ಟಿ, ಡಾ.ಪಾರ್ವತಿ ಜಿ.ಐತಾಳ್, ಡಾ.ಟಿ.ಜಿ.ಪ್ರಭಾಶಂಕರ್ `ಪ್ರೇಮಿ~ ಅವರು ಪ್ರಶಸ್ತಿಗೆ ಆಯ್ಕೆ ಮಾಡಿದ್ದರೆ, ಕೊಂಕಣಿ ಕೃತಿಯನ್ನು ಹರಿಶ್ಚಂದ್ರ ನಂಗ್ವೇಕರ್, ಲಿಯೋ ಡಿ~ಸೋಜಾ, ಪಯ್ಯನೂರ್ ರಮೇಶ್ ಸಮಿತಿ ಆಯ್ಕೆ ಮಾಡಿದೆ.