ನವದೆಹಲಿ: ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುದನ್ನು ಪ್ರತಿಭಟಿಸಿ ಕರ್ನಾಟಕದಲ್ಲಿ ನಡೆಯುತ್ತಿರುವ ಚಳವಳಿಗಳ ಬಗ್ಗೆ ಸುಪ್ರೀಂಕೋರ್ಟ್ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
`ಚಳವಳಿಗಳಿಂದ ಯಾವುದೇ ಉದ್ದೇಶ ಈಡೇರುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಅದರಿಂದ ಒಳ್ಳೆ ವಾತಾವರಣವೂ ಹಾಳಾಗುತ್ತದೆ. ಅರ್ಹ ಪ್ರಕರಣಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ~ ಎಂದು ಕಾವೇರಿ ವಿವಾದ ಕುರಿತ ಕರ್ನಾಟಕದ ಮರುಪರಿಶೀಲನಾ ಅರ್ಜಿ ವಿಚಾರಣೆ ಕಾಲಕ್ಕೆ ನ್ಯಾಯಮೂರ್ತಿ ಡಿ.ಕೆ. ಜೈನ್ ಮತ್ತು ಮದನ್. ಬಿ. ಲೋಕೂರ್ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ತಮಿಳುನಾಡು ಪರ ಹಾಜರಾದ ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್, `ಸಿಆರ್ಎಗೆ ಪುನರ್ ಪರಿಶೀಲನೆ ಅಧಿಕಾರವಿಲ್ಲ. ಸಿಆರ್ಎ ಅಧ್ಯಕ್ಷರಾದ ಪ್ರಧಾನಿ ಸ್ವತಂತ್ರವಾಗಿ ತೀರ್ಮಾನ ಮಾಡಲು ಸಾಧ್ಯವಿಲ್ಲ. ಇದೊಂದು ಅತ್ಯಂತ ಸೂಕ್ಷ್ಮ ವಿಚಾರ~ ಎಂದು ಪ್ರತಿಪಾದಿಸಿದರು.