ಬೆಂಗಳೂರು: ಕುದುರೆಮುಖ ಕಬ್ಬಿಣ ಮತ್ತು ಉಕ್ಕು ಕಂಪೆನಿ (ಕೆಐಒಸಿಎಲ್) ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ `ಪರಿಸರ ಪ್ರವಾಸೋದ್ಯಮ' ನಡೆಸಲು ಯೋಜನೆ ರೂಪಿಸಿರುವುದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು `ವೈಲ್ಡ್ಲೈಫ್ ಫಸ್ಟ್' ಎಚ್ಚರಿಸಿದೆ.
ಕುದುರೆಮುಖದಲ್ಲಿ ಪರಿಸರ ವಿರೋಧಿ ಗಣಿಗಾರಿಕೆ ನಡೆಸುತ್ತಿದ್ದ `ಕೆಐಒಸಿಎಲ್' ವಿರುದ್ಧ `ವೈಡ್ಲೈಫ್ ಫಸ್ಟ್' ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಅದರ ವಿಚಾರಣೆ ನಡೆಸಿದ ಕೋರ್ಟ್ ಗಣಿಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು 2005ರಲ್ಲಿ ಆದೇಶ ನೀಡಿತ್ತು. ಅಲ್ಲದೆ 2006ರಲ್ಲಿ ಆ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮವನ್ನೂ ನಡೆಸಲು `ಕೆಐಒಸಿಎಲ್'ಗೆ ಅವಕಾಶ ನಿರಾಕರಿಸಲಾಗಿತ್ತು. ಇದೀಗ ಅದೇ ಜಾಗದಲ್ಲಿ ಪರಿಸರ ಪ್ರವಾಸೋದ್ಯಮ ಯೋಜನೆ ರೂಪಿಸಿರುವುದು ಕಾನೂನು ಬಾಹಿರವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಗಣಿಗಾರಿಕೆ ನಡೆಸುತ್ತಿದ್ದ 1452 ಹೆಕ್ಟೇರ್ ಪ್ರದೇಶ ಮೇಲೆ 2005ರ ನಂತರ `ಕೆಐಒಸಿಎಲ್'ಗೆ ಯಾವುದೇ ಹಕ್ಕು ಇರುವುದಿಲ್ಲ. ಇದೀಗ ಆ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ಹೆಲಿಪ್ಯಾಡ್, ಗಾಲ್ಫ್ ಮೈದಾನ, ಸಾಹಸ ಮತ್ತು ಜಲಕ್ರೀಡೆಗೆ ಸಂಬಂಧಿಸಿದ ಯೋಜನೆ ರೂಪಿಸಲಾಗಿದೆ. ಇದಕ್ಕೆ ಸರ್ಕಾರ ಅನುಮತಿ ನೀಡಿದರೆ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿದಂತಾಗುತ್ತದೆ ಎಂದು `ವೈಲ್ಡ್ಲೈಫ್ ಫಸ್ಟ್' ಹೇಳಿದೆ.
ಗಣಿಗಾರಿಕೆ ನಡೆಸುತ್ತಿದ್ದ ಪ್ರದೇಶವನ್ನು ಪರಿಸರ ಸ್ನೇಹಿಯಾಗಿ ಪುನರುಜ್ಜೀವನ ಮಾಡಲು 2006ರಲ್ಲಿ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಆದ್ದರಿಂದ ಈ ಪ್ರದೇಶದಲ್ಲಿ ಯಾವುದೇ ಉದ್ಯಮದ ಚಟುವಟಿಕೆಗೆ ಅವಕಾಶ ನೀಡದೆ, ತಕ್ಷಣ ಪರಿಸರ ಪುನರುಜ್ಜೀವನ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಭದ್ರ ನದಿ ನೀರನ್ನು ಅವಲಂಬಿಸಿರುವ ಲಕ್ಷಾಂತರ ರೈತರ ಹಿತಾಸಕ್ತಿ ಕಾಪಾಡಬೇಕು. `ಕೆಐಒಸಿಎಲ್' ಸಲ್ಲಿಸಿರುವ ಪ್ರಸ್ತಾವನೆಯನ್ನು ತಿರಸ್ಕರಿಸುವುದು ಮಾತ್ರವಲ್ಲ, ತಕ್ಷಣ 1452 ಹೆಕ್ಟೇರ್ ಪ್ರದೇಶವನ್ನು ಮರುವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದೆ.