ನವದೆಹಲಿ(ಪಿಟಿಐ): ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್ಪಿಪಿ) ಜಿ. ಭವಾನಿ ಸಿಂಗ್ ಅವರನ್ನು ತೆಗೆದು ಹಾಕಲು ಈ ಹಿಂದೆ ಹೊರಡಿಸಿದ್ದ ಆದೇಶವನ್ನು ಹಿಂದಕ್ಕೆ ಪಡೆಯುವುದಾಗಿ ಕರ್ನಾಟಕ ಸರ್ಕಾರ ಶುಕ್ರವಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಎಸ್ಪಿಪಿ ನೇಮಕಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲರ ಪಟ್ಟಿ ಮತ್ತು ಅಗತ್ಯ ದಾಖಲೆಗಳನ್ನು ಕರ್ನಾಟಕ ಸರ್ಕಾರ, ಶೀಘ್ರದಲ್ಲೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಲಿದೆ ಎಂದು ಅಟಾರ್ನಿ ಜನರಲ್ ಜಿ.ಇ. ವಾಹನ್ವತಿ ನ್ಯಾಯಪೀಠಕ್ಕೆ ತಿಳಿಸಿದರು.
ಎಸ್ಪಿಪಿ ಕುರಿತ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್, ಕರ್ನಾಟಕ ಸರ್ಕಾರಕ್ಕೆ ಬುಧವಾರ ಸೂಚನೆ ನೀಡಿತ್ತು.
ಎಸ್ಪಿಪಿ ನೇಮಕಾತಿಗೆ ರಾಜ್ಯ ಸರ್ಕಾರ ನಾಲ್ಕು ಜನ ಹಿರಿಯ ವಕೀಲರ ಹೆಸರು ಇದ್ದ ಪಟ್ಟಿಯನ್ನು ಕಳುಹಿಸಿತ್ತು. ಆದರೆ, 2013ರ ಫೆಬ್ರುವರಿ 2ರಂದು ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳು, ಪಟ್ಟಿಯಲ್ಲಿ ಹೆಸರೇ ಇರದ ಭವಾನಿ ಸಿಂಗ್ ಅವರನ್ನು ಎಸ್ಪಿಪಿ ಆಗಿ ನೇಮಿಸಿದ್ದರು ಎಂದು ವಾಹನ್ವತಿ ಅವರು ಸುಪ್ರೀಂಕೋರ್ಟ್ಗೆ ತಿಳಿಸಿದರು.