ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ: ಶುಕ್ರವಾರ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರಿಂದ ಗಾಯಕ ಡಾ. ಶಿವಮೊಗ್ಗ ಸುಬ್ಬಣ್ಣ ಅವರಿಗೆ `ಕುವೆಂಪು ಸಿರಿಗನ್ನಡ~ ಪ್ರಶಸ್ತಿ ಪ್ರದಾನ.
ಅಧ್ಯಕ್ಷತೆ: ಪ್ರೊ.ಎಂ.ಆರ್.ದೊರೆಸ್ವಾಮಿ. ಅತಿಥಿ: ಜಾನಪದ ವಿದ್ವಾಂಸ ಡಾ.ಚಕ್ಕೆರೆ ಶಿವಶಂಕರ್. ಶಿವಮೊಗ್ಗ ಸುಬ್ಬಣ್ಣ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನವರು.
ವೃತ್ತಿಯಿಂದ ವಕೀಲರಾದರೂ ಸುಗಮ ಸಂಗೀತವನ್ನು ಸಾಧನೆಯ ಕ್ಷೇತ್ರವಾಗಿಸಿಕೊಂಡು ಹೆಸರು ಮಾಡಿದವರು. ಕುವೆಂಪು ಗೀತೆಗಳ ಗಾಯನ ಸಂದರ್ಭದಲ್ಲಿ ಕಾಣುವ ಅವರ ತನ್ಮಯತೆ ಕುವೆಂಪು ಹೇಳುವ `ಭಾವಸಮಾಧಿಯೊಳಾನಂದದವ ಹೀರಿ~ ಎನ್ನುವ ಮಾತನ್ನು ನೆನಪಿಸುತ್ತದೆ.
ಸುಗಮ ಸಂಗೀತ ಕ್ಷೇತ್ರದ ಸಾಧನೆಗಾಗಿ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಸುಬ್ಬಣ್ಣ ಕರ್ನಾಟಕ ಸರ್ಕಾರದ `ಸಂತ ಶಿಶುನಾಳ ಪ್ರಶಸ್ತಿ~ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ `ಕರ್ನಾಟಕ ಕಲಾತಿಲಕ~ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.
ಚಂದ್ರಶೇಖರ ಕಂಬಾರರ `ಕಾಡುಕುದುರೆ~ ಚಿತ್ರದ `ಕಾಡುಕುದರಿ ಓಡಿಬಂದಿತ್ತ~ ಹಾಡಿನ ಗಾಯನಕ್ಕಾಗಿ ಅಖಿಲ ಭಾರತ ಮಟ್ಟದ ಶ್ರೇಷ್ಠ ಗಾಯಕ ಪ್ರಶಸ್ತಿ ಪಡೆದಿದ್ದಾರೆ.