ಕೃಷ್ಣರಾಜಪುರ: ಕೃಷ್ಣರಾಜಪುರ ರೈಲ್ವೆ ನಿಲ್ದಾಣದ ಬಸ್ ತಂಗುದಾಣ ಮತ್ತು ಟಿನ್ ಫ್ಯಾಕ್ಟರಿ ಬಸ್ ತಂಗುದಾಣಗಳಲ್ಲಿ ನಿತ್ಯ ವಾಹನ ದಟ್ಟಣೆ ಉಂಟಾಗುತ್ತಿದ್ದು ರಸ್ತೆ ದಾಟಲು ನಾಗರಿಕರಿಗೆ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ರೈಲ್ವೆ ಕೆಳಸೇತುವೆ ಸುರಂಗ ಮಾರ್ಗ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಪಡಿಸಿದೆ.
ಈಗಾಗಲೇ ತೂಗು ಸೇತುವೆ ಬಳಿಯ ಸರ್ವೀಸ್ ರಸ್ತೆ ಮಾರ್ಗವನ್ನು ವಾಹನಗಳ ಸಂಚಾರಕ್ಕೆ ಸಮರ್ಪಕವಾಗಿ ಬಳಸಿಕೊಂಡು ರೈಲ್ವೆ ಕೆಳಸೇತುವೆ ಸುರಂಗ ಮಾರ್ಗ ನಿರ್ಮಿಸಲಾಗುವುದು ಎಂದು ಶಾಸಕ ಎನ್.ಎಸ್.ನಂದೀಶ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸದ್ಯದಲ್ಲಿ ಟಿನ್ ಫ್ಯಾಕ್ಟರಿಯ ನಿಲುಗಡೆಯಿಂದ ತೂಗುಸೇತುವೆ ಮಾರ್ಗವಾಗಿ ಹೊಸಕೋಟೆ ಕಡೆಗೆ ಬಸ್ಗಳು ಸಂಚರಿಸುತ್ತವೆ. ಹಾಗೆಯೇ ಟಿನ್ ಫ್ಯಾಕ್ಟರಿಯ ನಿಲುಗಡೆಯಿಂದ ಕೆ.ಆರ್.ಪುರ ರೈಲ್ವೆ ನಿಲುಗಡೆಯ ಮೂಲಕ ಐಟಿಪಿಎಲ್ ಹಾಗೂ ಮಾರತ್ಹಳ್ಳಿಗೆ ಬಸ್ಗಳು ಸಂಚರಿಸುತ್ತವೆ. ಇದರಿಂದಾಗಿ ಟಿನ್ ಫ್ಯಾಕ್ಟರಿ ನಿಲ್ದಾಣದಿಂದ ಕೃಷ್ಣರಾಜಪುರ ರೈಲ್ವೆ ನಿಲ್ದಾಣದ ವರೆಗೂ ನಿತ್ಯ ಟ್ರಾಫಿಕ್ ಜಾಮ್ ಆಗುತ್ತಿದೆ. ಆದ್ದರಿಂದಲೇ ಸುರಂಗ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ ಎಂದರು.