ನಾಗಮಂಗಲ: ರಸ್ತೆ ಸುರಕ್ಷತೆ ಹಾಗೂ ಅಪಘಾತ ತಡೆಗಟ್ಟುವಲ್ಲಿ ಚಾಲಕರ ಮತ್ತು ಪ್ರಯಾಣಿಕರ ಪಾತ್ರ ಮಹತ್ವದ್ದು ಎಂದು ತಾಲ್ಲೂಕು ಆರಕ್ಷಕ ವೃತ್ತ ನಿರೀಕ್ಷಕ ಟಿ.ಡಿ.ರಾಜು ಅಭಿಪ್ರಾಯ ಪಟ್ಟರು.
ಪಟ್ಟಣದಲ್ಲಿ ಜಿಲ್ಲಾ ಪೊಲೀಸ್ ನಾಗಮಂಗಲ ವೃತ್ತ ಶುಕ್ರವಾರ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತ ನಾಡಿದರು.
ದೇಶದಾದ್ಯಂತ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಾಯುವವರಿಗಿಂತ ಅಪಘಾತ ದಿಂದ ಮೃತರಾಗುತ್ತಿರುವ ಸಂಖ್ಯೆ ಹೆಚ್ಚಿದೆ. ಇದಕ್ಕೆ ಚಾಲಕರ ಮತ್ತು ಪಾದಾಚಾರಿಗಳ ಬೇಜವಾಬ್ದಾರಿ ಕಾರಣ. ರಸ್ತೆ ದಾಟುವಾಗ ಎಚ್ಚರಿಕೆ ಅಗತ್ಯ.
ಚಾಲಕರು ಕೂಡ ವಾಹನ ಚಾಲನೆ ಮಾಡುವಾಗ ವಿವೇಚನೆ, ಸಭ್ಯತೆ ಮತ್ತು ರಕ್ಷಣಾತ್ಮಕ ಅಂಶ ಗಳಿಂದ ವಾಹನ ಚಲಾಯಿಸಿದ್ದೇ ಆದರೆ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದರು.
ನಾಗಮಂಗಲ ಸಹಾಯಕ ಪ್ರಾದೇ ಶಿಕ ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕ ಕಿರಣ್ ಮಾತನಾಡಿ, ಮೊಬೈಲ್ ಬಳಸುತ್ತಾ ವಾಹನ ಚಲಾಯಿಸುವುದು, ಮಾತನಾಡುತ್ತಾ ರಸ್ತೆ ದಾಟಲು ಯತ್ನಿಸುವುದು ಸಲ್ಲ ಎಂದರು.
ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಾಗಮಂಗಲ ಪೋಲೀಸ್ ಇಲಾಖೆಯು ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ, ಚಿತ್ರಕಲೆ ಮತ್ತು ಸ್ಲೋಗನ್ ಬರವಣಿಗೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಬಹುಮಾನವನ್ನು ಕೆ.ಮಲ್ಲೇನಹಳ್ಳಿಯ ನಾಗರಾಜು ಪ್ರಾಯೋಜಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳು ಪಟ್ಟಣದ ಟಿ.ಬಿ. ಬಡಾವಣೆಯ ಬಿಜಿಎಸ್ ವೃತ್ತದಿಂದ ಮರಿಯಪ್ಪ ವೃತ್ತದವರೆಗೂ ಜಾಥಾ ನಡೆಸಿದರು.
ನಾಗಮಂಗಲ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಂ.ವಿ.ಶ್ರೀನಿವಾಸ್, ನಾಗಮಂಗಲ ಕೆಎಸ್ಆರ್ಟಿಸಿ ಡಿಪೋ ವ್ಯವಸ್ಥಾಪಕ ರವಿಶಂಕರ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕದ ಯೋಜನಾಧಿಕಾರಿ ಚಂದ್ರಶೇಖರ್ ಮತ್ತು ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಾಗಮಂಗಲ ಪಟ್ಟಣ ಠಾಣೆಯ ಪಿಎಸ್ಐ ವೆಂಕಟೇಗೌಡ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗಿರಿಜೇಶ್ ವಂದಿಸಿದರು. ಸಿಬ್ಬಂದಿಗಳಾದ ಶಿವಕುಮಾರ್, ಶಂಭುಗೌಡ ಮುಂತಾದವರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.