ನವದೆಹಲಿ (ಪಿಟಿಐ): ಕಾಮನ್ವೆಲ್ತ್ ಕ್ರೀಡಾಕೂಟದ ಕ್ವೀನ್ಸ್ ಬೇಟನ್ ರಿಲೇ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಗುರುವಾರ ಆರೋಪಪಟ್ಟಿ ಸಲ್ಲಿಸಿದೆ.
ಇದರಲ್ಲಿ, ಅಕ್ರಮ ಹಣ ಪಾವತಿಗೆ ಅನುಮತಿ ನೀಡಿದ ಆರೋಪದ ಮೇಲೆ ಕ್ರೀಡಾಕೂಟ ಸಂಘಟನಾ ಸಮಿತಿಯ ಅಧ್ಯಕ್ಷರಾಗಿದ್ದ ಸುರೇಶ್ ಕಲ್ಮಾಡಿ ಹಾಗೂ ಅವರ ಐವರು ಸಹೋದ್ಯೋಗಿಗಳನ್ನು ಹೆಸರಿಸಲಾಗಿದೆ.
2009ರಲ್ಲಿ ಲಂಡನ್ನಲ್ಲಿ ನಡೆದಿದ್ದ ಕ್ವೀನ್ಸ್ ಬೇಟನ್ ರಿಲೇಗೆ ಸಂಬಂಧಿಸಿದಂತೆ 8 ಕೋಟಿ ರೂಪಾಯಿಗೂ ಹೆಚ್ಚು ಹಣ ಅಕ್ರಮವಾಗಿ ಪಾವತಿಯಾಗಿದ್ದು, ಇದರಲ್ಲಿ 5 ಕೋಟಿ ರೂಪಾಯಿಯಷ್ಟು ವಿದೇಶಿ ವಿನಿಮಯ ಉಲ್ಲಂಘನೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಮಾಜಿ ಪ್ರಧಾನ ಕಾರ್ಯದರ್ಶಿ ಲಲಿತ್ ಭಾನೋಟ್, ಪ್ರಧಾನ ನಿರ್ದೇಶಕ ವಿ.ಕೆ.ವರ್ಮ, ಉಪ ಪ್ರಧಾನ ನಿರ್ದೇಶಕ ಸಂಜಯ್ ಮಹೀಂದ್ರು, ಜಂಟಿ ಪ್ರಧಾನ ನಿರ್ದೇಶಕ (ಲೆಕ್ಕಪತ್ರ ಮತ್ತು ಹಣಕಾಸು) ಎಂ.ಜಯಚಂದ್ರನ್ ಮತ್ತು ಎ.ಕೆ.ಮಟ್ಟೂ ಅವರು ಆರೋಪ ಪಟ್ಟಿಯಲ್ಲಿ ಸೇರಿದ್ದಾರೆ.
ಬೇಟನ್ ರಿಲೇಯ ವರ್ಣರಂಜಿತ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಎರಡನೇ ರಾಣಿ ಎಲಿಜಬೆತ್, ಭಾರತದ ಪ್ರಮುಖ ಅಥ್ಲೀಟ್ಗಳು ಹಾಗೂ ಸಂಘಟನಾ ಸಮಿತಿಯ ಅಧಿಕಾರಿಗಳು ಭಾಗವಹಿಸಿದ್ದರು.