ಶ್ರೀರಂಗಪಟ್ಟಣ: ತಾಲ್ಲೂಕಿನ ಆರತಿ ಉಕ್ಕಡದಲ್ಲಿ ಸಾರ್ವಜನಿಕ ರಸ್ತೆ ಹಾಗೂ ಬಾವಿಯನ್ನು ಅತಿಕ್ರಮಿಸಿರುವ ಅಹಲ್ಯಾದೇವಿ ಮಾರಮ್ಮ ದೇವಾಲಯ ಟ್ರಸ್ಟ್ನ ಅಧ್ಯಕ್ಷ ಚಂದ್ರು ಎಂಬವರು ಮಹಿಳೆಯೊಬ್ಬರನ್ನು ಮುಂದಿಟ್ಟುಕೊಂಡು ತಮ್ಮನ್ನು ಪ್ರಶ್ನಿಸುವವರ ವಿರುದ್ಧ ಸುಳ್ಳು ದೂರು ಕೊಡಿಸಿದ್ದು, ಅಂತಹ ದೂರನ್ನು ವಜಾ ಮಾಡಬೇಕು ಎಂದು ಆರತಿ ಉಕ್ಕಡ ಗ್ರಾಮಸ್ಥರು ಸೋಮವಾರ ಪಟ್ಟಣ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಒತ್ತಾಯಿಸಿದರು.
ಶಾಸಕ ರಮೇಶ ಬಂಡಿಸಿದ್ದೇಗೌಡ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ ತೆರಳಿದ ಗ್ರಾಮಸ್ಥರು, ಪೊಲೀಸರು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಅಹಲ್ಯಾದೇವಿ ಟ್ರಸ್ಟ್ ಅಧ್ಯಕ್ಷರ ವಿರುದ್ಧ ಈ ಮೊದಲು ಸರ್ಕಾರಿ ಜಮೀನು ಅತಿಕ್ರಮದ ಕುರಿತು ಗ್ರಾಮಸ್ಥರು ದೂರು ನೀಡಿದ್ದೇವೆ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಟ್ರಸ್ಟ್ ಅಧ್ಯಕ್ಷ ಚಂದ್ರು ತಮ್ಮನ್ನು ಪ್ರಶ್ನಿಸುವವರ ವಿರುದ್ಧ ಮಹಿಳೆ ಯರಿಂದ ಚಿನ್ನ ಕಳವು ಇತರ ಸಲ್ಲದ ಆರೋಪ ಹೊರಿಸಿದ್ದಾರೆ. ಇದರಿಂದ ಗ್ರಾಮದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ.ಲಕ್ಷಾಂತರ ರೂ. ಬೆಲೆಯ ಸರ್ಕಾರಿ ಜಮೀನನ್ನು ಅತಿ ಕ್ರಮಿಸಿ ಜನರಿಗೆ ಕಿರುಕುಳ ಕೊಡುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು. ಸುಳ್ಳು ದೂರು ಆಧರಿಸಿ ಅಮಾಯಕ ರಿಗೆ ತೊಂದರೆ ಕೊಡಬಾರದು ಎಂದು ಜವರಪ್ಪ ಹೇಳಿದರು.
ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ದೂರು ಕೊಟ್ಟ ಕೂಡಲೇ ಪೊಲೀಸರು ಕ್ರಮಕ್ಕೆ ಮುಂದಾಗ ಬಾರದು. ಸತ್ಯಾಸತ್ಯತೆ ಪರಿಶೀಲಿಸ ಬೇಕು. ತಪ್ಪು ಸಾಬೀತಾಗದ ಹೊರತು ವಿಚಾರಣೆ ನಡೆಸುವುದು, ಪ್ರಕರಣ ದಾಖಲಿಸುವುದು ಸರಿಯಲ್ಲ. ಸುಳ್ಳು ದೂರು ಕೊಡುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಪ್ರಕರಣ ಸಂಬಂಧ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳ ಲಾಗುವುದು ಎಂದು ಸಿಪಿಐ ಪ್ರಭಾಕರ ಸಿಂಧೆ ತಿಳಿಸಿದರು. ತಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್. ಸಂದೇಶ್, ಕಾಂತ ರಾಜು, ರವಿ, ಸಿದ್ದರಾಜು, ಶ್ರೀಕಂಠು, ಕುಮಾರ್, ಮಂಜುನಾಥ್ ಇತರರು ಇದ್ದರು.