ಧರ್ಮಪುರ: ಗಡಿ ಗ್ರಾಮ ಖಂಡೇನ ಹಳ್ಳಿಗೆ ಸುವರ್ಣ ಗ್ರಾಮೋದಯ ಯೋಜನೆಯ ಮೂಲಕ ಅಭಿವೃದ್ಧಿ ಕೆಲಸಗಳು ನಡೆಯಲಿದ್ದು, ಅವುಗಳ ಸಮರ್ಪಕ ಬಳಕೆ ಮತ್ತು ಗುಣಮಟ್ಟದ ಕಾಮಗಾರಿಯಾಗಬೇಕು ಎಂದು ಶಾಸಕ ಡಿ.ಸುಧಾಕರ್ ತಿಳಿಸಿದರು.
ಸಮೀಪದ ಖಂಡೇನಹಳ್ಳಿಯಲ್ಲಿ ಭಾನುವಾರ ‘ಸುವರ್ಣ ಗ್ರಾಮೋದಯ ಯೋಜನೆ’ಯ ವಿವಿಧ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಧರ್ಮಪುರ ಅತ್ಯಂತ ಹಿಂದುಳಿದ ಮತ್ತು ಗಡಿ ಹೋಬಳಿ ಪ್ರದೇಶವಾಗಿದ್ದು, ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಮತ್ತು ಗ್ರಾಮೀಣ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು. ಖಂಡೇನಹಳ್ಳಿಗೆ ಸುವರ್ಣ ಗ್ರಾಮೋದಯ ಯೋಜನೆಯಿಂದ ₨ 89 ಲಕ್ಷ ಅನುದಾನ ನೀಡಲಾಗಿದೆ. ಗ್ರಾಮದಲ್ಲಿ ಸಿಮೆಂಟ್ ರಸ್ತೆ, ಶುದ್ಧ ಕುಡಿಯುವ ನೀರಿನ ಘಟಕ, ಸಮುದಾಯ ಭವನ, ಹಾಲು ಉತ್ಪಾದಕರ ಸಂಘಕ್ಕೆ ಅನುದಾನ, ಚರಂಡಿ ಕಾಮಗಾರಿ ನಡೆಯಲಿವೆ. ಭೂಸೇನಾ ನಿಗಮದವರಿಗೆ ಕೆಲಸ ನೀಡಲಾಗಿದೆ ಎಂದರು.
ಜಿಲ್ಲಾ ಪಂಚಾಯ್ತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಎಸ್.ಪ್ರಕಾಶ್, ಸದಸ್ಯ ಚಂದ್ರಪ್ಪ ಮಾತನಾಡಿದರು.
ಬಿ.ವಿ.ಮಾಧವ್, ಕಂದಿಕೆರೆ ಸುರೇಶ್ಬಾಬು, ತಾಲ್ಲೂಕು ಪಂಚಾಯ್ತಿ ಸದಸ್ಯ ಕೆ.ಎಸ್.ವೀರಣ್ಣ, ಭೂಸೇನಾ ನಿಗಮದ ಸಹಾಯಕ ನಿರ್ದೇಶಕ ಶಶಿಕುಮಾರ್, ಖಂಡೇನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನೀಲಮ್ಮ ಪಾಂಡುರಂಗಪ್ಪ, ಉಪಾಧ್ಯಕ್ಷ ಚಂದ್ರಪ್ಪ, ಸದಸ್ಯರಾದ ಚಿದಾನಂದ್, ನಾಗವೇಣಿ, ಸರೋಜಮ್ಮ, ನರಸಿಂಹಮೂರ್ತಿ, ಗೋವಿಂದರಾಜು, ತಿಮ್ಮರಾಯ, ತಿಮ್ಮಯ್ಯ, ನಾಗರಾಜ್ ಉಪಸ್ಥಿತರಿದ್ದರು.