`ಸಮರ್ಥ ಸದ್ಗುರು ಶಿರಡಿ ಸಾಯಿಬಾಬಾ' ಧಾರಾವಾಹಿ ಪ್ರಸಾರ ಸುವರ್ಣ ವಾಹಿನಿಯಲ್ಲಿ ಡಿ.13ರಿಂದ ಪ್ರಾರಂಭವಾಗಿದೆ. ನಿರ್ದೇಶನ ಬುಕ್ಕಾಪಟ್ಟಣ ವಾಸು ಅವರದು. ಕತೆ ಬರೆಯುವಲ್ಲಿ ಅವರಿಗೆ ಪಿ.ಚಂದ್ರಿಕಾ, ರಾಜೇಶ್ವರಿ ವಾಸು, ಲಾಯರ್ ಶ್ರೀನಿವಾಸ್ ನೆರವಾಗಿದ್ದಾರೆ. `ಪ್ರಸ್ತುತ ಸಮಾಜ ಎದುರಿಸುತ್ತಿರುವ ಸಮಸ್ಯೆಗಳು ಹಲವು. ಅದರಲ್ಲಿ ಕೋಮವಾದವೂ ಒಂದು. ಇಂಥ ಸಮಯದಲ್ಲಿ ಸರ್ವಧರ್ಮ ಸಮನ್ವಯತೆ ಸಾರಿದ ಸಾಯಿಬಾಬಾ ಸಂದೇಶ ಅತ್ಯಗತ್ಯ. ಆ ನಿಟ್ಟಿನಲ್ಲಿ ಧಾರಾವಾಹಿ ರೂಪುತಳೆದಿದೆ' ಎಂದರು ವಾಸು.
ಸಂಭಾಷಣೆ ಬರೆದಿರುವ ಪಿ.ಚಂದ್ರಿಕಾ ಅವರು `ಧಾರಾವಾಹಿಯಲ್ಲಿ ಪವಾಡ, ಭಕ್ತಿ, ಭಾವ ಎಲ್ಲವೂ ಸೇರಿಕೊಂಡಿದೆ' ಎಂದರು.ಸಾಯಿಬಾಬಾ ಪಾತ್ರ ನಿರ್ವಹಿಸುತ್ತಿರುವ ನೀನಾಸಂ ಅಶ್ವತ್ಥ್ ಅವರು ಬಹಳ ದಿನಗಳಿಂದ ಇಂಥ ಪಾತ್ರಕ್ಕಾಗಿ ಕಾಯುತ್ತಿದ್ದರಂತೆ. ತಮ್ಮ ಹೈನುಗಾರಿಕೆ, ಸಿನಿಮಾ ನಟನೆಯ ನಡುವೆ ಸಾಯಿಬಾಬಾ ಪಾತ್ರದ ಮೇಲಿನ ಪ್ರೀತಿಯಿಂದ ಸಮಯ ಮಾಡಿಕೊಂಡು ನಟಿಸುತ್ತಿರುವುದಾಗಿ ಹೇಳಿದರು.
ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಸರವಣ ಧಾರಾವಾಹಿಯ ನಿರ್ಮಾಪಕ. ಧಾರಾವಾಹಿಯಲ್ಲಿ ಪಾತ್ರವೊಂದನ್ನೂ ನಿಭಾಯಿಸಿರುವ ಅವರಿಗೆ ಇದೇ ದಾರಿಯಲ್ಲಿ `ಮಂಕುತಿಮ್ಮನ ಕಗ್ಗ'ವನ್ನು ಕಿರುತೆರೆಗೆ ತರುವಾಸೆಯಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 5.30ಕ್ಕೆ `ಸಮರ್ಥ ಸದ್ಗುರು ಶಿರಡಿ ಸಾಯಿಬಾಬಾ' ಪ್ರಸಾರವಾಗುತ್ತಿದೆ.ಸೂರ್ಯ ವಶಿಷ್ಟ, ರಂಜಿತಾ ಸೂರ್ಯವಂಶಿ, ರವಿಭಟ್, ಅಶೋಕ್, ಉಮೇಶ್ ಹೆಗಡೆ, ನಮ್ರತಾ, ರವೀಂದ್ರನಾಥ್, ರತ್ನಮಾಲಾ ಮುಂತಾದವರು ನಟಿಸಿದ್ದಾರೆ.