ಸಿರುಗುಪ್ಪ: ಭಾರತಕ್ಕೆ ಮಹಾಭಾರತ ಮತ್ತು ರಾಮಾಯಣ ಎರಡು ಕಣ್ಣುಗಳೆಂದು ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದಂಗಳವರು ನುಡಿದರು.
ಪಟ್ಟಣದಲ್ಲಿ ಒಂದು ತಿಂಗಳ ಪರ್ಯಂತರ ನಡೆದ ವ್ಯಾಸವಿಜ್ಞಾನ ವೈಜಯಂತೀ ಜ್ಞಾನಸತ್ರ ಕಾರ್ಯಕ್ರಮದ ಮಹಾಭಾರತ ಹಾಗೂ ಶ್ರೀಭಗವತ ಪ್ರವಚನದ ಮಂಗಳ ಮಹೋತ್ಸವದಲ್ಲಿ ಅವರು ಮಂಗಳ ಶುಭ ಸಂದೇಶ ನೀಡಿದರು.
ಮಹಾಭಾರತವನ್ನು ಕೇವಲ ಕಥೆಯನ್ನಾಗಿ ಓದದೇ ಅದರಿಂದ ಕಲಿಯಬೇಕಾದ ತತ್ವಗಳನ್ನು ಅರಿಯಬೇಕೆಂದರು.
ಮಹಾಭಾರತದಲ್ಲಿ ನಡೆದ ಕುರುಕ್ಷೇತ್ರದಂತೆ ನಮ್ಮ ಶರೀರದಲ್ಲಿಯೂ ಪ್ರತಿನಿತ್ಯ ನಡೆವ ಕುರುಕ್ಷೇತ್ರ ಅಂದರೆ ಸದ್ಗುಣ ಮತ್ತು ದುರ್ಗುಣಗಳ ಯುದ್ಧದಲ್ಲಿ ಸದ್ಗುಣವು ನಡೆಯು ವಂತಾಗಬೇಕು, ಧರ್ಮರಾಜನಂತೆ ಬಾಳಬೇಕು ಎಂದು ಶ್ರೀಗಳು ಕರೆ ನೀಡಿದರು.
ಭಗವಂತನ ಸಾಕ್ಷಾತ್ಕಾರಕ್ಕೂ ಕಲಿಯುಗದಲ್ಲಿ ಭಕ್ತಿ ಉಂಟಾಗ ಬೇಕಾದರೆ ಭಾಗವತರ ಶ್ರವಣ ಮಾಡಿ ಪರೀಕ್ಷಿತನಂತೆ ಕೃತಾರ್ಥರಾಗಬೇಕೆಂದು ಉಪದೇಶಿಸಿದರು.
ಶ್ರೀಪಾದಂಗಳವರನ್ನು ಪಟ್ಟಣದ ಪ್ರಮುಖ ಬೀದಿಯಲ್ಲಿ ಅಲಂಕೃತ ತೆರೆದ ವಾಹನದಲ್ಲಿ ಪುರಜನರು ಅದ್ದೂರಿ ಯಾಗಿ ಶೋಭಾಯಾತ್ರೆ ನಡೆಸಿ ಬೀಳ್ಕೊಟ್ಟರು.
ವ್ಯಾಸವಿಜ್ಞಾನ ವೈಜಯಂತೀ ಜ್ಞಾನಸತ್ರ ಸಮಿತಿಯ ಅಧ್ಯಕ್ಷ ಕೆ.ಎನ್.ಕೃಷ್ಣಮೂರ್ತಿ, ಬಿ.ಗುರುರಾಜಾಚಾರ್, ಎ.ಜೆ. ಸಂಜಯಕುಮಾರ್, ಕೆ. ಶ್ರೀನಿವಾಸಮೂರ್ತಿ, ಎಚ್.ಜೆ. ಮುರಳೀಧರಾಚಾರ್, ಗೋಪಿನಾಥ ಶಾಸ್ತ್ರಿ, ಜೆ.ಶಾಮಾಚಾರ್, ಎಚ್.ಕೆ. ಗುರುರಾಜಾರಾವ್ ಮತ್ತು ವಿಪ್ರ ಬಾಂಧವರು ಹಾಜರಿದ್ದರು.