ಚನ್ನಪಟ್ಟಣ: ಪಟ್ಟಣದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವಲ್ಲಿ ಸಚಿವ ಸಿ.ಪಿ. ಯೋಗೇಶ್ವರ್ ಆಸಕ್ತಿ ತೋರದಿರುವುದು ವಿಷಾದನೀಯ ಎಂದು ತಿಟ್ಟಮಾರನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಸುಕನ್ಯಾ ಅಭಿಪ್ರಾಯಪಟ್ಟರು.
ಪಟ್ಟಣದ ಹೊರವಲಯದ ರಾಮಮ್ಮನ ಕೆರೆ ಅಂಗಳದಲ್ಲಿ ಕಿಚ್ಚಬಾಯ್ಸ ಕ್ರಿಕೆಟರ್ಸ್ ಹಾಗೂ ದಲಿತ ಸೇನಾ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್ನಲ್ಲಿ ವಿಜೇತ ತಂಡಕ್ಕೆ ಮಂಗಳವಾರ ನಗದು ಬಹುಮಾನ ಹಾಗೂ ಟ್ರೋಫಿ ವಿತರಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆ ಅನಾವರಣ ಮಾಡಲು ಹಾಗೂ ವಿವಿಧ ಕ್ರೀಡೆಗಳಲ್ಲಿ ತರಬೇತಿ ಪಡೆಯಲು ಸುಸಜ್ಜಿತವಾದ ಕ್ರೀಡಾಂಗಣ ಇಲ್ಲದಿರುವುದನ್ನು ಯೋಗೇಶ್ವರ್ ಮನಗಾಣಬೇಕು.
ಇನ್ನು ಮುಂದಾದರೂ ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಿಸುವಲ್ಲಿ ಅವರು ಆಸಕ್ತಿ ತೋರಲಿ ಎಂದು ಸುಕನ್ಯಾ ಆಗ್ರಹಿಸಿದರು.ಪ್ರಥಮ ಸ್ಥಾನ ಪಡೆದ ದಶವಾರ ತಂಡಕ್ಕೆ 5,001 ರೂ. ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಕಾಡಂಕನ ಹಳ್ಳಿ ತಂಡಕ್ಕೆ 3,001 ರೂ. ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು.
ದಲಿತ ಸೇನಾ ಸಮಿತಿ ತಾಲ್ಲೂಕು ಅಧ್ಯಕ್ಷರಾದ ಶಿವರಾಜ್, ಜೆಡಿಎಸ್ ಮುಖಂಡ ಪುರುಷೋತ್ತಮ, ಟೂರ್ನಿಯ ವ್ಯವಸ್ಥಾಪಕ ಕೇಶವಮೂರ್ತಿ ಮುಂತಾದವರು ಹಾಜರಿದ್ದರು.