ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆ ತನ್ನ 12ನೇ ವಾರ್ಷಿಕೋತ್ಸವದ ಅಂಗವಾಗಿ ರಾಮಲಲಿತ ಕಲಾ ಮಂದಿರದ ಸಹಯೋಗದಲ್ಲಿ ಶನಿವಾರದಿಂದ ನಾಲ್ಕು ದಿನಗಳ ಸಂಗೀತೋತ್ಸವ ಆಯೋಜಿಸಿದೆ. ಇದೇ ಸಂದರ್ಭದಲ್ಲಿ ವಿದ್ವಾನ್ ಬಿ.ಕೆ.ಚಂದ್ರಮೌಳಿ ಅವರಿಗೆ ಸ್ವರಲಯ ಶೃಂಗ ಬಿರುದು ಪ್ರದಾನ.
ಚಂದ್ರಮೌಳಿ ರಾಜ್ಯದ ಹೆಸರಾಂತ ಮೃದಂಗ ವಿದ್ವಾಂಸರು. ವಿದುಷಿ ರಾಜಮ್ಮ ಕೇಶವಮೂರ್ತಿ ಅವರ ಪುತ್ರ. 12 ವರ್ಷದವರಿದ್ದಾಗ ತ್ಯಾಗರಾಜ ಆರಾಧನೆಯ ಕಾರ್ಯಕ್ರಮದಲ್ಲಿ ತಮ್ಮ ತಾಯಿಗೆ ಸಾಥ್ ನೀಡಿದ್ದರು. ಕಳೆದ 40 ವರ್ಷಗಳಲ್ಲಿ ಚಿಂತಲಪಲ್ಲಿ ವೆಂಕಟರಾವ್, ಚಿಂತಲಪಲ್ಲಿ ರಾಮಚಂದ್ರ ರಾವ್, ಡಾ. ಆರ್.ಕೆ. ಶ್ರೀಕಂಠನ್, ವೀಣಾ ದೊರೆಸ್ವಾಮಿ ಅಯ್ಯಂಗಾರ್, ಡಾ. ಎನ್. ರಮಣಿ, ಡಾ. ಎಲ್. ಸುಬ್ರಹ್ಮಣ್ಯಂ, ಕೆ.ಬಿ. ಸುಂದರಾಂಬಾಳ್, ಡಾ. ಕದ್ರಿ ಗೋಪಾಲನಾಥ್, ಬಾಂಬೆ ಸಹೋದರಿಯರು ಸೇರಿದಂತೆ ಹಲವು ಖ್ಯಾತನಾಮರಿಗೆ ಮೃದಂಗ ಸಾಥ್ ನೀಡಿದ್ದಾರೆ.
ಚಂದ್ರಮೌಳಿ ಆಕಾಶವಾಣಿ ಕಲಾವಿದರು. ಹಲವು ದೇಶಗಳಲ್ಲಿ ಕಾರ್ಯಕ್ರಮ ನೀಡಿರುವ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಪಾಶ್ಚಿಮಾತ್ಯ ಪ್ಯೂಷನ್ ಮ್ಯೂಸಿಕ್ ತಂಡವಾದ `ಮೇಘಾ~ದ ಸದಸ್ಯರು. ಮೂಕಾಂಬಿಕಾ ತಾಳವಾದ್ಯ ಸಂಗೀತ ಕಲಾಶಾಲೆಯ ಮೂಲಕ ನೂರಾರು ಶಿಷ್ಯರಿಗೆ 26 ವರ್ಷಗಳಿಂದ ಮೃದಂಗದಲ್ಲಿ ತರಬೇತಿ ನೀಡುತ್ತಿದ್ದಾರೆ.