ಸವಣೂರು: ಸಾರ್ವಜನಿಕ ಕೆರೆಯ ಸಮರ್ಪಕ ದಾಖಲೆ ಹಾಗೂ ಅಭಿವೃದ್ಧಿಗೆ ಆಗ್ರಹಿಸಿ ಜೆಡಿಎಸ್ ತಾಲ್ಲೂಕು ಘಟಕದ ವತಿಯಿಂದ ನಡೆಸಿದ ಉಪವಾಸ ಸತ್ಯಾಗ್ರಹ, ಕಂದಾಯ ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ಅಂತ್ಯಗೊಂಡಿತು. ಸೋಮವಾರ ಜೆಡಿಎಸ್ ಕಾರ್ಯಕರ್ತರು ಧರಣಿ ಕೈಗೊಂಡಿದ್ದ ಸ್ಥಳಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಶರಣಬಸಪ್ಪ ಕೋಟ್ಟೆಪ್ಪಗೋಳ, ಕೆರೆಯ ವ್ಯಾಪ್ತಿ ಹಾಗೂ ದಾಖಲಾತಿಗಳನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಲು ಭೂ ಮಾಪನ ಇಲಾಖೆಗೆ ಸೂಚಿಸಲಾಗಿದೆ.
ಕೆರೆಯ ಜಾಗಕ್ಕೆ ಪ್ರತ್ಯೇಕ ಹಿಸ್ಸಾ ನಂಬರ್ ದಾಖಲಿಸುವ ಬಗ್ಗೆ ನಿರ್ದೇಶನ ನೀಡಲು ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ರಾಜ್ಯ ಆಯುಕ್ತರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ತಾಲ್ಲೂಕಿನ ಕುರುಬರಮಲ್ಲೂರ ಗ್ರಾಮದಲ್ಲಿ ಒತ್ತುವರಿಗೊಂಡ ಕೆರೆ ಉಳಿಸಬೇಕು. ಅದಕ್ಕೆ ಸರ್ವೆ ನಂ. ನೀಡಿ ಅದು ಸರ್ಕಾರಿ ಭೂಮಿ ಎಂದು ನಮೂದಿಸಬೇಕು ಎಂದು ಜೆಡಿಎಸ್ ಕಾರ್ಯಕರ್ತರು, ಅಧ್ಯಕ್ಷ ಪ್ರಕಾಶ ಬಾರ್ಕಿ ನೇತೃತ್ವದಲ್ಲಿ ಕಳೆದ ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ತಹಶೀಲ್ದಾರ ಕಚೇರಿಯ ಆವರಣದಲ್ಲಿನಡೆದ ಧರಣಿಗೆ ವಿವಿಧ ಗ್ರಾಮಗಳ ರೈತರು, ಕರವೇ ಹಾಗೂ ಮತ್ತಿತರ ಸಂಘಟನೆಗಳು ಬೆಂಬಲ ನೀಡಿದ್ದವು.
ಗ್ರಾಮೀಣ ಕ್ರೀಡೆಗಳ ಕಣ್ಮರೆ: ವಿಷಾದ
ರಟ್ಟೀಹಳ್ಳಿ: ಆಧುನಿಕತೆಯ ಬರದಲ್ಲಿ ನಮ್ಮ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ ಎಂದು ಶಾಸಕರಾದ ಯು.ಬಿ.ಬಣಕಾರ ನುಡಿದರು. ಸಮೀಪದ ಅಣಜಿ ಗ್ರಾಮದಲ್ಲಿ ಹೆಗ್ಗೇರಿ ಸಿದ್ಧೇಶ್ವರ, ಬೀರಲಿಂಗೇಶ್ವರ ಮತ್ತು ಆಂಜನೇಯಸ್ವಾಮಿ ಕಾರ್ತೀಕೋತ್ಸವ ನಿಮಿತ್ತ ಮಾರುತಿ ಯುವಕ ಸಂಘ ಹಮ್ಮಿಕೊಂಡಿದ್ದ 39ನೇ ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಭರಮಗೌಡ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂ-ಕು ಪಂಚಾಯ್ತಿ ಅಧ್ಯಕ್ಷೆ ರೇಣುಕಾ ಚಲವಾದಿ ಕ್ರೀಡಾ ಜ್ಯೋತಿ ಬೆಳಗಿಸಿದರು. ನಿವೃತ್ತ ಡಿವೈಎಸ್ಪಿ ಐ.ಎಸ್.ಎಣ್ಣೇರ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.