ಬೆಂಗಳೂರು: `ತಪ್ಪು ದಾಖಲೆ ನೀಡಿರುವುದಾಗಿ ಅಂಗವಿಕಲ ಕ್ರೀಡಾಪಟು ಪಿ.ಸೋಮಶೇಖರ್ ಒಪ್ಪಿಕೊಂಡಿದ್ದಾರೆ. ಹಾಗಾಗಿ ಏಕಲವ್ಯ ಪ್ರಶಸ್ತಿ ಬೇಡವೆಂದು ಅವರು ಇಲಾಖೆಗೆ ಪತ್ರ ಬರೆದಿದ್ದಾರೆ~ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಆರ್.ಪೆರುಮಾಳ್ ಹೇಳಿದ್ದಾರೆ.
ಆದರೆ ರೋಷನ್ ಫರಾರೋ (ಬಾಡಿ ಬಿಲ್ಡಿಂಗ್) ಹಾಗೂ ಎಸ್. ನವೀನ್ (ಕರಾಟೆ) ಇನ್ನೂ ಸೂಕ್ತ ದಾಖಲೆ ನೀಡಿಲ್ಲ. ಹಾಗೂ ದಾಖಲೆಗಳ ಪರಿಶೀಲನೆ ವೇಳೆ ಅವರು ಹಾಜರಿರಲಿಲ್ಲ ಎಂದು ಪೆರುಮಾಳ್ ಮಂಗಳವಾರ `ಪ್ರಜಾವಾಣಿ~ಗೆ ತಿಳಿಸಿದರು.
`ಇಲಾಖೆಯ ನಿರ್ದೇಶಕ ಸುರೇಶ್ ಸದ್ಯದಲ್ಲೇ ಪರಿಶೀಲನಾ ಸಮಿತಿ ಸಭೆ ಕರೆಯಲಿದ್ದಾರೆ. ಈ ಸಂದರ್ಭದಲ್ಲಿ ಸೂಕ್ತ ದಾಖಲೆಗಳೊಂದಿಗೆ ಹಾಜರಾಗುವಂತೆ ರೋಷನ್ ಹಾಗೂ ನವೀನ್ಗೆ ಸೂಚಿಸಲಾಗಿದೆ. ಆಕಸ್ಮಾತ್ ಅವರು ಸರಿಯಾದ ದಾಖಲೆ ನೀಡದಿದ್ದರೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು~ ಎಂದು ಅವರು ಹೇಳಿದ್ದಾರೆ.
ಇಲಾಖೆಯು ಮೊದಲು ಪ್ರಕಟಿಸಿದ ಏಕಲವ್ಯ ಪ್ರಶಸ್ತಿ ಪಟ್ಟಿಯಲ್ಲಿದ್ದ ಈ ಮೂರು ಮಂದಿ ಸಲ್ಲಿಸಿರುವ ದಾಖಲೆಗಳು ಅನುಮಾನಕ್ಕೆ ಕಾರಣವಾಗಿದ್ದರಿಂದ ತಡೆಹಿಡಿಯಲಾಗಿತ್ತು.