ಜೋಹಾನ್ಸ್ಬರ್ಗ್: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಮುಖಾಮುಖಿಯಾಗಲಿವೆ.
ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿರುವ ಮಹೇಂದ್ರ ಸಿಂಗ್ ದೋನಿ ನೇತೃತ್ವದ ಸೂಪರ್ ಕಿಂಗ್ಸ್ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಆದರ ಜೊತೆಗೆ ಪಾಯಿಂಟ್ ಖಾತೆ ತೆರೆಯುವ ಕನಸು ಹೊಂದಿದೆ. ಈ ಪಂದ್ಯ ಇಲ್ಲಿನ ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ಜರುಗಲಿದೆ.
ಹರಭಜನ್ ಸಾರಥ್ಯದ ಮುಂಬೈ ಕೂಡಾ ಗೆಲುವಿನ ಹಾದಿಗೆ ಮರಳು ವಿಶ್ವಾಸ ಹೊಂದಿದೆ. ಮುಂಬೈ ಹಾಗೂ ಯಾರ್ಕ್ಷೈರ್ ತಂಡಗಳ ನಡುವಿನ ಹಿಂದಿನ ಪಂದ್ಯ ಮಳೆಯ ಕಾರಣ ರದ್ದುಗೊಂಡಿತ್ತು. ಇದರಿಂದ ಉಭಯ ತಂಡಗಳು ತಲಾ ಎರಡು ಪಾಯಿಂಟ್ ಹಂಚಿಕೊಂಡಿದ್ದವು. ಮೊದಲ ಪಂದ್ಯದಲ್ಲಿ ಮುಂಬೈ ಕೂಡಾ ಸೋಲು ಕಂಡಿದೆ. ಆದ್ದರಿಂದ ಈ ತಂಡದ ಖಾತೆಯಲ್ಲಿ ಕೇವಲ ಎರಡು ಪಾಯಿಂಟ್ಗಳಿವೆ.
ಸೂಪರ್ ಕಿಂಗ್ಸ್ ಹಾಗೂ ಮುಂಬೈ ತಂಡಗಳ ಸೆಮಿಫೈನಲ್ ಕನಸು ಬಹುತೇಕ ಅಸ್ತಮಿಸಿದೆ. ಆದರೆ, 2010ರ ಚಾಂಪಿಯನ್ ದೋನಿ ಬಳಗಕ್ಕೆ ಈ ಟೂರ್ನಿಯಲ್ಲಿ ಮೊದಲ ಗೆಲುವು ಪಡೆಯಬೇಕು ಎನ್ನುವು ಕನಸಿದೆ. ದೋನಿ ಪಡೆ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸುಧಾರಿಸಿಕೊಂಡರೆ ಈ ಕನಸು ನನಸಾಗಬಹುದು.