ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರಣಗಿ: ರೋಚಕ ಹೋರಿ ಬೆದರಿಸುವ ಸ್ಪರ್ಧೆ

Last Updated 21 ಡಿಸೆಂಬರ್ 2012, 6:54 IST
ಅಕ್ಷರ ಗಾತ್ರ
ಲಕ್ಷ್ಮೇಶ್ವರ: ಅತ್ಯಂತ ಆವೇಶ ಭರಿತವಾಗಿ ದಿಕ್ಕುದೆಸೆಯಿಲ್ಲದೆ ಮನ ಬಂದತ್ತ ಓಡಿ ಬರುತ್ತಿದ್ದ ಸೊಕ್ಕಿದ ಹೋರಿಗಳನ್ನು ಹಿಡಿಯಲು ಯುವಕರ ಗುಂಪು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದ ದೃಶ್ಯ ಸಮೀಪದ ಸೂರಣಗಿ ಗ್ರಾಮದಲ್ಲಿ ಗುರುವಾರ ಜರುಗಿದ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಕಂಡು ಬಂದಿತು. 
 
ಗ್ರಾಮದ ರಾಘವೇಂದ್ರ ಯುವಕ ಮಂಡಳದ ಸದಸ್ಯರು ಈ ಸ್ಪರ್ಧೆ ಸಂಘಟಿಸಿದ್ದರು. ಕೋಡುಗಳ ಮೇಲೆ ದಟ್ಟ ಬಲೂನ್ ಗುಚ್ಛ, ಮೈಮೇಲೆ ಜೂಲಾ, ಕೋಡುಗಳಿಗೆ ಬಣ್ಣ ಬಣ್ಣದ ರಿಬ್ಬನ್, ದೇಹದ ತುಂಬಾ ಒಣ ಕೊಬ್ಬರಿ ಬಟ್ಟಲುಗಳ ಸರ ಕಟ್ಟಿಕೊಂಡು ಬಿರುಗಾಳಿಯಂತೆ ರಭಸವಾಗಿ ಓಡಿ ಬರುವ ಹೋರಿಗಳನ್ನು ತಡೆದು ನಿಲ್ಲಿಸಿ ಅವುಗಳ ಮೈ ಮೇಲಿನ ವಸ್ತುಗಳನ್ನು ಯಾರು ಕಿತ್ತುಕೊಳ್ಳುತ್ತಾರೋ ಅಂಥವರಿಗೆ ಸಂಘಟಕರು ಬಹುಮಾನ ಘೋಷಿಸಿದ್ದರು. 
 
ಹೀಗಾಗಿ ಹೋರಿಗಳನ್ನು ಹಿಡಿಯಲೆಂದೇ ಬ್ಯಾಡಗಿ ತಾಲ್ಲೂಕಿನ ಬ್ಯಾಡಗಿ, ಮೋಟೆಬೆನ್ನೂರಿನಿಂದ ನಾಲ್ಕಾರು ಯುವಕರ ಗುಂಪುಗಳು ಸನ್ನದ್ಧವಾಗಿ ಬಂದಿದ್ದವು. ಮಿಂಚಿನ ವೇಗದಲ್ಲಿ ಓಡಿ ಬರುತ್ತಿದ್ದ ಹೋರಿಗಳನ್ನು ಧೈರ್ಯದಿಂದ ನಿಲ್ಲಿಸಲು ಆ ಯುವಕರು ಪಡು ತ್ತಿದ್ದ ಸಾಹಸ ಸಹಸ್ರಾರು ಜನತೆಯಲ್ಲಿ ಕುತೂಹಲದೊಂದಿಗೆ ತಣ್ಣನೆ ಭಯ ವನ್ನೂ ಹುಟ್ಟಿಸಿತ್ತು. ಓಡಿ ಬರುತ್ತಿದ್ದ ಹೋರಿ ಯುವಕನನ್ನು ಚಿಮ್ಮಿ ಒಗೆದಿದ್ದ  ರಿಂದ ಆತನಿಗೆ ಸಣ್ಣ ಗಾಯವಾಯಿತು. ಆದರೆ ಮತ್ತೆ ಆ ಯುವಕ ಏನೂ ಆಗಿಲ್ಲ ಎಂಬಂತೆ ಮತ್ತೆ ಹೋರಿ ಹಿಡಿ ಯಲು ರೆಡಿ ಆಗಿದ್ದನ್ನು ಕಂಡ ಜನರು ಅವಕ್ಕಾದರು. 
 
ಕರ್ನಾಟಕ ರತ್ನ, ಡಯಾನಾ, ಬಿರು ಗಾಳಿ, ಮಲೆನಾಡ ರಾಜ, ಬಳ್ಳಾರಿ ನಾಗ, ಆದಿಶೇಷ, ಹಾವೇರಿ ಕಾ ತೂಫಾನ್ ಹೀಗೆ ವಿವಿಧ ರೋಚಕ ಹೆಸರುಗಳನ್ನು ಹೋರಿಗಳಿಗೆ ಮಾಲೀಕರು ಇಟ್ಟಿದ್ದರು. ಇದರ ಜೊತೆಗೆ ಅಕ್ಕಮಹಾದೇವಿ ಎಂಬ ಹೆಸರಿನ ಆಕಳು ಮಾತ್ರ ಎಲ್ಲರ ಗಮನ ಸೆಳೆಯಿತು. ಅದರ ಓಟದ ರಭಸಕ್ಕೆ ನಿಂತು ನೋಡುತ್ತಿದ್ದ ಸಹಸ್ರಾರು ಜನ ತಾವಾಗಿಯೇ ಅದಕ್ಕೆ ದಾರಿ ಕೊಡು ತ್ತಿದ್ದರು. ಅಲ್ಲದೆ ಸುಂದರವಾಗಿ ಶೃಂಗರಿ ಸಿಕೊಂಡು ಬೆಲೆ ಬಾಳುವ ವಸ್ತುಗಳನ್ನು ದೇಹದ ತುಂಬೆಲ್ಲ ಹಾಕಿಕೊಂಡ ಒಂದು ಹೋರಿ ಮಾತ್ರ ಓಡದೆ ನಿಧಾನವಾಗಿ ನಡೆದು ಬರುತ್ತಿತ್ತು. ಇದೇನು ಮಹಾ ಇದನ್ನು ಹಿಡಿಯುವುದು ಬಹಳ ಸುಲಭ ಎಂದು ಲೆಕ್ಕ ಹಾಕುತ್ತಿದ್ದ ಯುವಕರ ಗುಂಪಿಗೆ ತನ್ನ ಕೊರಳಲ್ಲಿನ ಒಂದು ವಸ್ತುವನ್ನೂ ಮುಟ್ಟಲು ಅದು ಅವಕಾಶ ಕೊಡುತ್ತಿರಲಿಲ್ಲ. ಈ ದೃಶ್ಯ ಎಲ್ಲರಲ್ಲಿ ಅಚ್ಚರಿ ಮೂಡಿಸಿತ್ತು. 
 
ರಾಜ್ಯದ ಹಾನಗಲ್, ಹಾವೇರಿ, ಬ್ಯಾಡಗಿ, ರಾಣೇಬೆನ್ನೂರು, ಗದಗ, ಶಿಕಾರಿಪುರ, ಶಿವಮೊಗ್ಗ ಸೇರಿದಂತೆ ಪಕ್ಕದ ತಮಿಳುನಾಡಿನಿಂದ 150ಕ್ಕೂ ಹೆಚ್ಚು ಹೋರಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. 
 
ನೀರು ಪೂರೈಕೆ: ವ್ಯತ್ಯಯ
ಗದಗ: ಕೊರಳಹಳ್ಳಿ ಹತ್ತಿ ನೀರು ಪೂರೈಕೆ ಮಾಡುವ ಮುಖ್ಯ ಕೊಳವೆ ಮಾರ್ಗ ಒಡೆದಿದ್ದು, ದುರಸ್ತಿ ಆದ ಬಳಿಕ ನೀರು ಪೂರೈಕೆ ಮಾಡಲಾಗು ವುದು ಎಂದು ನಗರಸಭೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT