ವಿಶೇಷ ವರದಿ
ಸಾಲಿಗ್ರಾಮ : ಬಸವ ಮತ್ತು ಇಂದಿರಾ ಅವಾಜ್ ಯಾೀಜನೆಯಡಿ ಸೂರು ನೀಡಲು ಗ್ರಾಮ ಪಂಚಾಯಿತಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿ ಮಂಜೂರಾತಿ ಪತ್ರ ನೀಡಲಾಗಿದ್ದರೂ ನಿಯಮಗಳಿಂದಾಗಿ ಫಲಾನುಭವಿಗಳಿಗೆ ಸ್ವಂತ ಸೂರು `ಗಗನಕುಸುಮ~ವಾಗುತ್ತಿದೆ.
2010-11ನೇ ಸಾಲಿನಲ್ಲಿ ರಾಜ್ಯ ಸರ್ಕಾರ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಅಂಬೇಡ್ಕರ್ ಮತ್ತು ಬಸವ ವಸತಿ ಯಾೀಜನೆಯಡಿ ಕೆ.ಆರ್.ನಗರ ತಾಲ್ಲೂಕಿನ 31ಗ್ರಾಮ ಪಂಚಾಯಿತಿಗಳಿಗೆ 2450ಕ್ಕೂ ಅಧಿಕ ಮನೆಗಳನ್ನು ನೀಡಿತ್ತು. ಇದರಲ್ಲಿ 2004 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಜತೆಗೆ 2011-12ನೇ ಸಾಲಿನಲ್ಲಿ ಇಂದಿರಾ ಅವಾಜ್ ಯಾೀಜನೆಯಡಿ 889 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಿತ್ತು. ಈ ಪೈಕಿ 668 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇವರಲ್ಲಿ ಬಹುತೇಕ ಮಂದಿ ಸ್ವಂತ ಸೂರು ಹೊಂದುವ ಆಸೆಗೆ ತಿಲಾಂಜಲಿ ಬಿಡುತ್ತಿದ್ದಾರೆ.
ರಾಜ್ಯ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದ್ದು, ಆಯ್ಕೆ ಗೊಂಡ ಫಲಾನುಭವಿಗಳ ನಿವೇಶನ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಇರಬೇಕು. ನಾಲ್ಕು ಗೋಡೆಗಳನ್ನು ಕಟ್ಟಿಯೇ ಮನೆಯನ್ನು ನಿರ್ಮಾಣ ಮಾಡಬೇಕು ಜತೆಗೆ ಮಂಜೂರಾತಿ ಪತ್ರ ತಲುಪಿದ 15ದಿನಗಳಲ್ಲಿ ಮನೆ ಕಟ್ಟಲು ಶುರು ಮಾಡಬೇಕು. ಇದು 6 ತಿಂಗಳಲ್ಲಿ ಪೂರ್ಣಗೊಳ್ಳಬೇಕು, ಇಲ್ಲದಿದ್ದರೆ ಅನುದಾನವನ್ನು ಹಿಂಪಡೆಯಲಾಗುತ್ತದೆ.
ಮನೆ ನಿರ್ಮಾಣವಾದ ನಂತರ ವಾಸಕ್ಕೆ ಮಾತ್ರ ಉಪಯಾೀಗಿಸಬೇಕು ಬೇರೆ ಉದ್ದೇಶಕ್ಕೆ ಉಪಯಾೀಗಿಸುವುದು ಕಂಡು ಬಂದರೆ ಬಡ್ಡಿ ಸಮೇತ ಒಂದೇ ಕಂತಿನಲ್ಲಿ ಸರ್ಕಾರ ನೀಡಿರುವ ಹಣವನ್ನು ಫಲಾನುಭವಿಗಳು ವಾಪಸ್ ನೀಡಬೇಕು. ಇದಲ್ಲದೆ ಮನೆ ನಿರ್ಮಾಣದ ಪ್ರತಿ ಹಂತವನ್ನು ಆನ್ಲೈನ್ ಮತ್ತು ಜಿಪಿಎಸ್ ಪ್ರಗತಿ ವರದಿಯ ಆಧಾರದ ಮೇಲೆ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ.
ಈ ಯಾೀಜನೆಯಡಿ ಮನೆ ನಿರ್ಮಿಸಲು ರೂ 63.500 ಸಾವಿರ ಅಗತ್ಯವಿದ್ದು ಇದರಲ್ಲಿ ರೂ. 50 ಸಾವಿರವನ್ನು ಸರ್ಕಾರ ಅನುದಾನ ರೂಪದಲ್ಲಿ ನೀಡುತ್ತಿದ್ದು, ಉಳಿದಂತೆ ರೂ.10 ಸಾವಿರ ಸಾಲವಾಗಿದ್ದು, ರೂ. 3,500 ಹಣವನ್ನು ಫಲಾನುಭವಿ ಭರಿಸಬೇಕು. ಅಲ್ಲದೆ ಮನೆ ಪೂರ್ಣವಾಗುತ್ತಿದ್ದಂತೆ ಬ್ಯಾಂಕ್ ಚಾಲ್ತಿ ಖಾತೆಯ ಮೂಲಕ ಸರ್ಕಾರ ಫಲಾನುಭವಿಗೆ ಹಣ ನೀಡಲು ಮುಂದಾಗಿರುವುದು ಫಲಾನುಭವಿಗಳಿಗೆ ನುಂಗಲಾರದ ತುತ್ತಾಗಿದೆ.
ಪ್ರಸಕ್ತ ಸಾಲಿನಲ್ಲಿ ಆಯ್ಕೆಯಾಗಿರುವ ಬಹುತೇಕ ಫಲಾನುಭವಿಗಳ ಬಳಿ ಇರುವ ನಿವೇಶನ ಗ್ರಾಮ ಠಾಣೆಗೆ ಒಳಪಟ್ಟಿಲ್ಲ. ಹಾಗಾದರೆ ಸ್ವಂತ ಮನೆ ಹೊಂದುವುದು ಹೇಗೆ ಎಂದು ಬಹುತೇಕ ಫಲಾನುಭವಿಗಳು ನಿಟ್ಟುಸಿರು ಬಿಡುವಂತೆ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.