ಮೈಸೂರು: `ಸಪ್ತಸ್ವರ ಬಳಗ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಗಾನಯೋಗಿ ಪಂಚಾಕ್ಷರಿ ಗವಾಯಿ ಸ್ಮರಣಾರ್ಥ ಸೆ. 5 ಮತ್ತು 6ರಂದು ಜಗನ್ಮೋಹನ ಅರಮನೆಯಲ್ಲಿ ಯುವಜನ ಸಂಗೀತೋತ್ಸವವನ್ನು ಹಮ್ಮಿಕೊಳ್ಳಲಾಗಿದೆ~ ಎಂದು ಟ್ರಸ್ಟ್ನ ಅಧ್ಯಕ್ಷ ಪ್ರೊ.ಬಿ.ಸೋಮಶೇಖರ್ ಹೇಳಿದರು.
`ಹಿಂದೂಸ್ತಾನಿ ಹಾಗೂ ಕರ್ನಾಟಕಿ ಸಂಗೀತಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂಗೀತೋತ್ಸವದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಹಾಗೂ ವಿದೇಶದಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿರುವ ಯುವ ಕಲಾವಿದರು ಭಾಗವಹಿಸಲಿದ್ದಾರೆ~ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
`ಸೆ. 5ರಂದು ಸಂಜೆ 4 ಗಂಟೆಗೆ ಸಂಗೀತ ವಿವಿ ಕುಲಪತಿ ಡಾ. ಹನುಮಣ್ಣನಾಯಕ ದೊರೆ ಕಾರ್ಯಕ್ರಮ ಉದ್ಘಾಟಿಸುವರು. ಬಳಿಕ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸೆ.6 ರಂದು ಬೆಳಿಗ್ಗೆ 9 ರಿಂದ ರಾತ್ರಿ 9ರ ವರೆಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ~ ಎಂದರು.
ವಿಸರ್ಜನಾ ಉತ್ಸವ
`ಮೈಸೂರು ನಗರ ಸಾಮೂಹಿಕ ವಿನಾಯಕ ವಿಸರ್ಜನಾ ಮಂಡಳಿ ವತಿಯಿಂದ ಸೆ. 5ರಂದು ಗಣಪತಿ ವಿಸರ್ಜನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ~ ಎಂದು ವಕೀಲ ಕೇಶವಮೂರ್ತಿ ಹೇಳಿದರು.
`ವೀರನಗೆರೆ ಗಣಪತಿ ದೇವಸ್ಥಾನದಿಂದ ಮಧ್ಯಾಹ್ನ 1 ಗಂಟೆಗೆ ಗಣೇಶ ವಿಗ್ರಹಗಳೊಂದಿಗೆ ಹೊರಟು ಅಶೋಕ ರಸ್ತೆ ಮೂಲಕ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ತಲುಪಲಾಗುವುದು. ಅಲ್ಲಿಂದ ದೊಡ್ಡಗಡಿಯಾರ, ವಿನೋಬಾ ರಸ್ತೆ, ಸಂತೆಪೇಟೆ, ದೇವರಾಜ ಅರಸು ರಸ್ತೆ, ಚಾಮರಾಜ ಜೋಡಿ ರಸ್ತೆ ಮೂಲಕ ಶ್ರೀರಂಗಪಟ್ಟಣದ ಸಂಗಂ ತಲುಪಲಾಗುವುದು~ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
`ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಕೆ.ಎಸ್.ನಾರಾಯಣಾಚಾರ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಗಂನಲ್ಲಿ ಈ ಬಾರಿ 75ಕ್ಕೂ ಹೆಚ್ಚು ಗಣೇಶ ವಿಗ್ರಹಗಳನ್ನು ಏಕಕಾಲಕ್ಕೆ ವಿಸರ್ಜನೆ ಮಾಡಲಾಗುವುದು~ ಎಂದರು.