ಬೆಂಗಳೂರು: ದರ್ಶನ್ ಗಳಿಸಿದ `ಹ್ಯಾಟ್ರಿಕ್~ ಗೋಲುಗಳ ನೆರವಿನಿಂದ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ಎಐ) ತಂಡದವರು ಇಲ್ಲಿ ನಡೆಯುತ್ತಿರುವ ಡಿ.ಎಸ್. ಮೂರ್ತಿ ಹಾಗೂ ವಿ. ಕರುಣಾಕರನ್ ಸ್ಮಾರಕ ರಾಜ್ಯ ಮಟ್ಟದ ಹಾಕಿ ಟೂರ್ನಿಯ ಪಂದ್ಯದಲ್ಲಿ ಸುಲಭ ಗೆಲುವು ಪಡೆದು ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಎಸ್ಎಐ 6-0ಗೋಲುಗಳಿಂದ ಬೆಂಗಳೂರಿನ ಬಿಇಎಂಎಲ್ ತಂಡವನ್ನು ಮಣಿಸಿತು.
ದರ್ಶನ್ 14, 23 ಹಾಗೂ 27ನೇ ನಿಮಿಷದಲ್ಲಿ ಗೋಲು ಗಳಿಸಿದರು. ಇನ್ನೊಂದು ಗೋಲನ್ನು ತಿಮ್ಮಣ್ಣ ವಿರಾಮಕ್ಕೆ ಒಂದು ನಿಮಿಷ ಬಾಕಿ ಇರುವಾಗ ತಂದಿಟ್ಟರು.
ವಿರಾಮದ ನಂತರವೂ ಚುರುಕಿನ ಆಟವಾಡಿದ ಎಸ್ಎಐ ತಂಡದ ಬಿಜು ಹಾಗೂ ಉಮೇಶ್ ಕ್ರಮವಾಗಿ 40 ಮತ್ತು 45ನೇ ನಿಮಿಷದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿದರು. ಆರ್ಬಿಐ ಹಾಗೂ ಕೆಜಿಎಫ್ ಐಡಿಯಲ್ ಸ್ಪೋರ್ಟ್ಸ್ ಕ್ಲಬ್ ತಂಡಗಳ ನಡುವಿನ ಪಂದ್ಯ 4-4ಗೋಲುಗಳಿಂದ ಡ್ರಾದಲ್ಲಿ ಅಂತ್ಯ ಕಂಡಿತು.
ಆರ್ಬಿಐನ ತನು ನಂಜಪ್ಪ (13ನೇ ನಿ.), ರೋಷನ್ (26ನೇ ನಿ.), ಕೆವಿನ್ (39ನೇ ನಿ.) ಹಾಗೂ ಅಶ್ವಿನ್ ಪೂಂಚಾ (48ನೇ ನಿ.) ಗೋಲು ತಂದಿಟ್ಟರು. ಕೆಜಿಎಫ್ ತಂಡದ ಪ್ರಸನ್ನ (10ನೇ ನಿ.), ಶ್ರೀಧರ್ (11ನೇ ನಿ.), ಪ್ರವೀಣ್ (19ನೇ ನಿ.) ಹಾಗೂ ಷಣ್ಮುಗಂ (37ನೇ ನಿ.) ಗೋಲು ಗಳಿಸಿದರು.
ಸೆಮಿಫೈನಲ್ ಪಂದ್ಯಗಳಲ್ಲಿ ಬಿಇಎಂಎಲ್-ಡಿವೈಎಸ್ಎಸ್ (ಮಧ್ಯಾಹ್ನ 2.30) ಹಾಗೂ ಎಚ್ಎಎಲ್-ಎಸ್ಎಐ (ಸಂಜೆ 4.30) ಎದುರಾಗಲಿವೆ.