ಬೆಂಗಳೂರು: ಯುವ ಆಟಗಾರ ಬಿ.ಆರ್. ನಿಕ್ಷೇಪ್ ಮತ್ತು ಐ.ಬಿ. ಅಕ್ಷಯ್ ಇಲ್ಲಿ ನಡೆಯುತ್ತಿರುವ ಕೆಟಿಟಿಪಿಎ, ಎಂ.ಪಿ. ಪ್ರಕಾಶ್ ಸ್ಮಾರಕ ಎಐಟಿಎ ಟೆನಿಸ್ ಚಾಂಪಿಯನ್ಷಿಪ್ನ 18 ವರ್ಷದೊಳಗಿನವರ ಬಾಲಕರ ವಿಭಾಗದ ಸಿಂಗಲ್ಸ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದರು.
ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಿಕ್ಷೇಪ್ 7-5, 6-3ರಲ್ಲಿ ಪಿ. ಮನವ್ ಎದುರು ಗೆಲುವು ಪಡೆದರೆ, ಅಕ್ಷಯ್ 6-2, 6-1ರಲ್ಲಿ ಚಿರಂತನ ವಿರುದ್ಧ ಜಯ ಸಾಧಿಸಿ ನಾಲ್ಕರ ಘಟ್ಟ ತಲುಪಿದರು.
ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಅಖಿಲ್ ಕನಕರಾಜ್ 7-5, 6-3ರಲ್ಲಿ ಪ್ರಾಣೇಶ್ ಪ್ರಭು ಮೇಲೂ, ವಿ.ಸಿ. ವಶಿಷ್ಠ 6-2, 1-6, 6-2ರಲ್ಲಿ ಅರ್ಜುನ್ ರಾಮಕೃಷ್ಣನ್ ವಿರುದ್ಧವೂ ಗೆಲುವು ಸಾಧಿಸಿ ಸೆಮಿಫೈನಲ್ ತಲುಪಿದರು.
16 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಆದಿತ್ಯ ಅನಂತ್ ಗೋಖಲೆ 6-4, 6-1ರಲ್ಲಿ ವಿಘ್ನೇಶ್ ಮೇಲೂ, ಪ್ರಾಣೇಶ್ ಪ್ರಭು 5-7, 6-4, 6-3ರಲ್ಲಿ ಅಮರನಾಥ್ ಅರೋರಾ ವಿರುದ್ಧವೂ, ಮಹಮ್ಮದ್ ತಾಕುದ್ದೀನ್ 7-5, 7-6ರಲ್ಲಿ ಯಶ್ ಯಾದವ್ ಮೇಲೂ, ನಿಹಿತ್ ರಾವಲ್ 3-6, 6-3, 6-4ರಲ್ಲಿ ಅರ್ಜುನ್ ವಿರುದ್ಧವೂ ಜಯ ಪಡೆದು ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟರು.
ಬಾಲಕಿಯರ 18 ವರ್ಷದೊಳಗಿವನರ ವಿಭಾಗದಲ್ಲಿ ನಿಶಾ ಶೆಣೈ 7-6, 6-2ರಲ್ಲಿ ಎನ್. ಶರಣ್ಯಾ ಮೇಲೂ, ಪ್ರಗತಿ ನಟರಾಜ್ 6-2, 7-6ರಲ್ಲಿ ನೂಪುರ್ ಉಮಾಶಂಕರ್ ವಿರುದ್ಧವೂ, ರಷ್ಮಿಕಾ ರಾಜನ್ 6-3, 6-3ರಲ್ಲಿ ಮಧುಮಿತಾ ಮೀನಾಕ್ಷಿ ಮೇಲೂ, ಮೌಲಿಕಾ ರಾಮ್ 6-4, 6-1ರಲ್ಲಿ ನಂದಿನಿ ಗುಪ್ತಾ ವಿರುದ್ಧವೂ ಜಯ ಸಾಧಿಸಿದರು.
ಇದೇ ವಿಭಾಗದ 16 ವರ್ಷದೊಳಗಿನವರ ವಯೋಮಾನದಲ್ಲಿ ರಷ್ಮಿಕಾ ರಾಜನ್ 1-6, 7-6, 6-0ರಲ್ಲಿ ಮಾನಸಿ ರೆಡ್ಡಿ ಮೇಲೂ, ಟಿ. ಆರುಷಿ 6-1, 6-1ರಲ್ಲಿ ಮುಸ್ಕಾನ್ ರಂಜನ್ ವಿರುದ್ಧವೂ, ಹರ್ಷಾ ಸಾಯಿ ಚಲ್ಲಾ 6-2, 7-6ರಲ್ಲಿ ಮಧುಮಿತಾ ಮೀನಾಕ್ಷಿ ಮೇಲೂ, ಅಭಿನಿಕಾ 6-0, 6-7, 6-3ರಲ್ಲಿ ನಿಖಿತಾ ಪಿಂಟೊ ವಿರುದ್ಧವೂ ಗೆಲುವು ಪಡೆದು ಸೆಮಿಫೈನಲ್ ಪ್ರವೇಶಿಸಿದರು.