ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಸ್ಟರ್ ಪದ್ಧತಿ ಜಾರಿ: ವಿವಿಧೆಡೆ ಪ್ರತಿಭಟನೆ

Last Updated 9 ಜನವರಿ 2014, 6:08 IST
ಅಕ್ಷರ ಗಾತ್ರ

ರಾಯಚೂರು: ಹೊಸದಾಗಿ ಜಾರಿಗೊಳಿರುವ ಸೆಮಿಸ್ಟರ್‌ ಪದ್ಧತಿಯನ್ನು ಕೂಡಲೇ ಕೈಬಿಡಬೇಕು ಹಾಗೂ ಯಥಾಸ್ಥಿತಿಯಂತೆ ದೀರ್ಘಕಾಲಿನ ಕೋರ್ಸ್‌ ಅನ್ನು ನಡೆಸಬೇಕು ಎಂದು ಎಐಡಿವೈಒ, ಎಐಡಿಎಸ್‌ ಸಂಘಟನೆಯ  ಜಿಲ್ಲಾ ಘಟಕಗಳ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಉದ್ಯೋಗ ಮತ್ತು ತರಬೇತಿ ಪ್ರಧಾನ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.  ಐಟಿಐಗಳಲ್ಲಿ ನಡೆಸುವ ಕುಶಲಕರ್ಮಿ ತರಬೇತಿ (ಸಿಟಿಎಸ್)ಯಲ್ಲಿ ಏಕಾಏಕಿ ಸೆಮಿಸ್ಟರ್‌ ಪದ್ಧತಿಯನ್ನು ಜಾರಿಗೊಳಿಸಲಾಗಿದೆ. ಆಗಸ್ಟ್‌ 2013ರಲ್ಲಿ ಪ್ರವೇಶ ಪ್ರಕ್ರಿಯೆ ಬಹುಪಾಲು ಮುಗಿದ ಮೇಲೆ ಐಟಿಐನ ದೀರ್ಘಕಾಲಿನ ಬೋಧನಾ ಪದ್ಧತಿ ಹಾಗೂ ತರಬೇತಿ ಬದಲಾಯಿಸಿ, ಯಾವುದೇ ಸಮಾಲೋಚನೆ ನಡೆಸದೇ ಜಾರಿಗೊಳಿಸಿರುವ ಸೆಮಿಸ್ಟರ್‌ ಪದ್ಧತಿಯನ್ನು ಅವೈಜ್ಞಾನಿಕವಾಗಿದೆ ಎಂದು ಆಪಾದಿಸಿದರು.

ಐಟಿಐ ಕೋರ್ಸ್‌ನಲ್ಲಿ ಸೆಮಿಸ್ಟರ್ ಪದ್ಧತಿಯ ಜಾರಿಯಿಂದ ಪರೀಕ್ಷೆ ಮತ್ತು ಅಂಕಗಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತದೆ. ಆದರೆ, ಉತ್ತಮ ತರಬೇತಿ ಪಡೆಯುವುದಿಲ್ಲ. ಉದ್ಯೋಗಾರ್ಹತೆಗೆ ತೀವ್ರ ಧಕ್ಕೆಯನ್ನುಂಟು ಮಾಡುತ್ತದೆ ಎಂದು ಸಮಸ್ಯೆ ವಿವರಿಸಿದರು.

ಹೊಸದಾಗಿ ಜಾರಿಗೊಳಿಸಿರುವ ಸೆಮಿಸ್ಟರ್‌ ಪದ್ಧತಿಯನ್ನು ಕೈಬಿಡಬೇಕು ಹಾಗೂ ಮುಂದೆ ಯಾವುದೇ ರೀತಿಯ ಪಠ್ಯಕ್ರಮ ಬದಲಾವಣೆಗೆ ಸಾಕಷ್ಟು ಅವಕಾಶ ನೀಡಿ, ತಜ್ಞರ ಹಾಗೂ ಎಲ್ಲ ಭಾಗಿದಾರರ ಅಭಿಪ್ರಾಯ ಸಂಗ್ರಹಿಸಿ ಮುಂದುವರೆಯಬೇಕು ಎಂದು ಎಐಡಿವೈಒ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಚನ್ನಬಸವ ಜಾನೇಕಲ್‌, ಎಐಡಿಎಸ್‌ಒ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಪ್ರಮೋದ ಕುಮಾರ ಜಿಲ್ಲಾಧಿಕಾರಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದ್ದಾರೆ.

ಐಟಿಐ ವಿದ್ಯಾರ್ಥಿಗಳ ಹೋರಾಟ ಸಮಿತಿಯ ಪದಾಧಿಕಾರಿ­ಗಳಾದ ದೀನದಯಾಳುಪತಿ, ಹನುಮಂತ, ಸುರೇಶ, ಚಾಂದ­ಪಾಷಾ, ಮಹೇಂದ್ರ, ಮಂಜು, ವಿದ್ಯಾಸಾಗರ, ಸುಮಂತ್ ಪ್ರತಿಭಟನೆಯಲ್ಲಿ ಇದ್ದರು.

ಸಿಂಧನೂರು ವರದಿ
ಐಟಿಐನಲ್ಲಿ ಏಕಾಏಕಿ ಸೆಮಿಸ್ಟರ್ ಪದ್ಧತಿ ಜಾರಿಗೊಳಿಸಿರುವುದನ್ನು ವಿರೋಧಿಸಿ ಎಐಡಿಎಸ್ಓ ಹಾಗೂ ಎಐಡಿವೈಒ ಸಂಘಟನೆಗಳ ನೇತೃತ್ವದಲ್ಲಿ ಸ್ಥಳೀಯ ಐಟಿಐ ಕಾಲೇಜು ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ವೆಂಕನಗೌಡ ಆರ್.ಪಾಟೀಲ ಮೂಲಕ ಡೈರೆಕ್ಟರ್ ಜನರಲ್ ಆಫ್ ಎಂಪ್ಲಾಯ್ಮೆಂಟ್ ಟ್ರೈನಿಂಗ್ ನವದೆಹಲಿ ಅವರಿಗೆ ಬುಧವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.

ಬೆಳಿಗ್ಗೆ 12ಗಂಟೆ ಸುಮಾರು ವಳಬಳ್ಳಾರಿ ಚನ್ನಬಸವೇಶ್ವರ ಕೈಗಾರಿಕಾ ತರಬೇತಿ ಕೇಂದ್ರದಿಂದ ಆರಂಭವಾದ ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಗೆ ಪ್ರವಾಸಿ ಮಂದಿರ, ಗಾಂಧಿಸರ್ಕಲ್ ಮೂಲಕ ತಹಶೀಲ್ದಾರ್‌ ಕಾರ್ಯಾಲಯ ತಲುಪಿತು. ಮೆರವಣಿಗೆಯುದ್ದಕ್ಕೂ ವಿದ್ಯಾರ್ಥಿಗಳು ಸೆಮಿಸ್ಟರ್ ಪದ್ಧತಿ ವಿರೋಧಿ ಘೋಷಣೆಗಳನ್ನು ಕೂಗಿದರು.

ಎಐಡಿವೈಓ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಉದ್ಬಾಳ ಮಾತನಾಡಿ, ಸೆಮಿಸ್ಟರ್ ಪದ್ಧತಿ ಐಟಿಐ ತರಬೇತಿ ಸಂಪೂರ್ಣ ತದ್ವಿರುದ್ಧವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಯಾವಕಾಶ ಕಡಿಮೆಯಾಗಿ, ಪರೀಕ್ಷೆ ಮತ್ತು ಅಂಕಗಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರಕುತ್ತದೆ. ಸೆಮಿಸ್ಟರ್‌ನಲ್ಲಿ ವಿದ್ಯಾರ್ಥಿ ಹೆಚ್ಚಿನ ಅಂಕ ಗಳಿಸಬಹುದು. ಆದರೆ ಉತ್ತಮ ತರಬೇತಿ ಪಡೆಯಲು ಅಸಾಧ್ಯ ಮಾತು. ಇದು ವಿದ್ಯಾರ್ಥಿಯ ಉದ್ಯೋಗಾರ್ಹತೆಗೆ ತೀವ್ರ ಧಕ್ಕೆಯುನ್ನುಂಟು ಮಾಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಐಟಿಐ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಲಿಂಗಸುಗೂರು ವರದಿ
ಕುಶಲಕರ್ಮಿ ವೃತ್ತಿಒ ತರಬೇತಿಗಳಲ್ಲಿ ಯಾವುದೇ ಮುನ್ಸೂ­ಚನೆ ಇಲ್ಲದೆ ಸೆಮಿಸ್ಟರ್‌ ಪದ್ಧತಿ ಜಾರಿ­ಗೊಳಿಸಲು ಸಂಬಂಧಿಸಿದ ಇಲಾಖೆ ತಜ್ಞರ ಸಲಹೆ ಪಡೆಯದೆ ಏಕಾ ಏಕಿ ನಿರ್ಣಯ ಕೈಗೊಂಡಿರುವುದು ಅವೈ­ಜ್ಞಾನಿ­ಕ­­ವಾ­ಗಿದೆ. ಕೂಡಲೆ ಸೆಮಿಸ್ಟರ್‌ ಪದ್ಧತಿ ಕೈಬಿಡುವಂತೆ ಆಗ್ರಹಿಸಿ ಎಐಡಿಎಸ್‌ಓ ಮತ್ತು ಎಐಡಿಐಓ ಸಂಘಟನೆಗಳು ಮನವಿ ಸಲ್ಲಿಸಿದವು.

ಬುಧವಾರ ಉದ್ಯಾನದಿಂದ ಪ್ರತಿಭ­ಟನಾ ರ್‍್ಯಾಲಿ ನಡೆಸಿದ ಸಂಘಟನೆಗಳು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಉಪವಿಭಾಗಾಧಿಕಾರಿ ಕಚೇರಿ ವರೆಗೆ ತೆರಳಿದರು. ಸೆಮಿಸ್ಟರ್‌ ಪದ್ಧತಿಗೆ ಅನುಗುಣವಾದ ಪಠ್ಯಕ್ರಮ, ಶಿಕ್ಷಕರಿಗೆ ತರಬೇತಿ ನೀಡಲಾಗಿಲ್ಲ. ತರಬೇತಿದಾ­ರರು ಮತ್ತು ತಜ್ಞರ ಮಧ್ಯೆ ಈ ವಿಷ­ಯದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ­ಗಳಿವೆ ಎಂದು ಆಪಾದಿಸಿದರು.

ಸೆಮಿಸ್ಟರ್‌ ಪದ್ಧತಿಗೆ ಅಗತ್ಯ ಪಠ್ಯಕ್ರಮ, ಪರಿಕರಗಳ ಪೂರೈಕೆ ಆಗಿಲ್ಲ. ಅವೈಜ್ಞಾನಿಕ ಪದ್ಧತಿ ಐಟಿಐ ಕಾಲೇಜು ಉಪನ್ಯಾಸಕರು ಮತ್ತು ಮಕ್ಕಳಲ್ಲಿ ಗೊಂದಲ ಸೃಷ್ಟಿಸಿದೆ. ಸೆಮಿಸ್ಟರ್‌ ಪದ್ಧತಿ ಕೈಬಿಡಬೇಕು. ಸರ್ಕಾರಿ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ಇತರೆ ಬೇಡಿಕೆಗಳ ಮನವಿ ಸಲ್ಲಿಸಿದರು.

ಸಂಘಟನೆಗಳ ತಾಲ್ಲೂಕು ಘಟಕ ಸಂಚಾಲಕ ತಿರುಪತಿ ಗೋನವಾರ. ಮುಖಂಡರಾದ ಅಯ್ಯಪ್ಪ, ಗಂಗಾಧರ, ಪವನಕುಮಾರ, ರಮೇಶ, ಮಹೇಶ, ಅಮರೇಶ, ಬಸಲಿಂಗ, ನಾಗರಾಜ, ಬಸನಗೌಡ, ಆಸಿಫ್‌, ಮಲ್ಲಿಕಾ­ರ್ಜುನ, ಅಶೋಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT