ತೀರ್ಥಹಳ್ಳಿ: ‘ತರಗತಿಗಳಲ್ಲಿ ಪ್ರತಿಭೆ ಅರಳುವುದಿಲ್ಲ. ಇಂದಿನ ಶಿಕ್ಷಣದಲ್ಲಿನ ಸೆಮಿಸ್ಟರ್ ಪದ್ಧತಿ ವಿದ್ಯಾರ್ಥಿಗಳನ್ನು ಕಸ್ಟಡಿಗೆ ಹಾಕಿಕೊಂಡಂತಿದೆ. ಸಮಾಜ ವಿಜ್ಞಾನದ ವಿಚಾರಕ್ಕೆ ಬಂದಾಗಲಂತೂ ಇದು ಸರಿಯಲ್ಲ’ ಎಂದು ಜಾನಪದ ವಿದ್ವಾಂಸ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಹಿ.ಶಿ. ರಾಮಚಂದ್ರೇ ಗೌಡ ಅಭಿಪ್ರಾಯಪಟ್ಟರು.ಅವರು ಶನಿವಾರ ಇಲ್ಲಿ ಬೆಂಗಳೂರಿನ ‘ಕಲಾತೀರ’ ತುಂಗಾ ಮಹೋತ್ಸವ-2011ರ ಕುರಿತು ಆಯೋಜಿಸಿದ್ದ ‘ನೃತ್ಯ-ಸಾಹಿತ್ಯ-ಸಂಗೀತ, ಜಾನಪದ ಸಾಂಸ್ಕೃತಿಕ ಸಮಾವೇಶ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಸಂಗೀತ, ಸಾಹಿತ್ಯದ ಬಗ್ಗೆ ತಿಳಿವಳಿಕೆ ಎಂದರೆ ನಮ್ಮ ಸೃಜನಶೀಲತೆಯನ್ನು ಬೆಳೆಸಿಕೊಂಡ ಹಾಗೆ. ಸಂಗೀತ ಇಲ್ಲದ ಸಮಾಜ ಇಲ್ಲ. ಸಂಗೀತ ಒತ್ತಡಗಳನ್ನು ಕಡಿಮೆ ಮಾಡುತ್ತದೆ ಎಂದರು.
ಸುಗಮ ಸಂಗೀತ ಗಾಯಕ ಗರ್ತಿಕೆರೆ ರಾಘಣ್ಣ ಮಾತನಾಡಿ, ವಿಶ್ವವೇ ಒಂದು ಲಯದಲ್ಲಿದೆ. ಅದರಲ್ಲಿ ಸಂಗೀತವೂ ಒಂದು. ಸಂಗೀತದ ಗುಣ ಪ್ರತಿಯೊಬ್ಬರಲ್ಲೂ ಇದೆ ಎಂದರು.ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೌಲಾನಿ ಧರ್ಮಯ್ಯ, ಹಿರಿಯ ನೃತ್ಯ ವಿಮರ್ಶಕ ಎಸ್.ಎನ್. ಚಂದ್ರಶೇಖರ್ ಉಪಸ್ಥಿತರಿದ್ದರು. ಉದಯಕುಮಾರ ಶೆಟ್ಟಿ ಸ್ವಾಗತಿಸಿದರು. ಆರ್.ಜಿ. ಹಳ್ಳಿ ನಾಗರಾಜ್ ಪ್ರಾಸ್ತಾವಿಕ ಮಾತನಾಡಿದರು. ಸಾವಿತ್ರಿ ಮಜುಮ್ದಾರ್ ನಿರೂಪಿಸಿದರು.