ಕೊಪ್ಪಳ: ಐಟಿಐಯನ್ನು ಪದವಿಪೂರ್ವ ಕೋರ್ಸ್ಗೆ ಸಮಾನದ ಅರ್ಹತೆ ಎಂಬುದಾಗಿ ಪರಿಗಣಿಸಬೇಕು, ಸೆಮಿಸ್ಟರ್ ಪದ್ಧತಿಯನ್ನು ರದ್ದುಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದಲ್ಲಿ ಬುಧವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಗದಗ ರಸ್ತೆಯ ಖಾಸಗಿ ಐಟಿಐ ಕಾಲೇಜಿನಿಂದ ಅಶೋಕ ವೃತ್ತದ ವರೆಗೆ ಮೆರವಣಿಗೆ ನಡೆಸಿದರು.
ಸೆಮಿಸ್ಟರ್ ಪದ್ಧತಿಯಲ್ಲಿ ಪಠ್ಯಕ್ರಮವನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಅಲ್ಲದೇ, ಈ ಪದ್ಧತಿ ವಿದ್ಯಾರ್ಥಿಗಳ ಮೇಲೆ ಆರ್ಥಿಕ ಹೊರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸೆಮಿಸ್ಟರ್ ಪದ್ಧತಿಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪಿಯುಸಿ ಮತ್ತು ಐಟಿಐಗೆ ಪ್ರವೇಶ ಪಡೆಯಲು ಎಸ್ಎಸ್ಎಲ್ಸಿ ಉತ್ತೀರ್ಣರಾಗಿರಬೇಕು. ಎರಡೂ ಕೋರ್ಸ್ಗಳ ಅವಧಿ ಎರಡು ವರ್ಷಗಳೇ ಆಗಿದೆ. ಈ ಹಿನ್ನೆಲೆಯಲ್ಲಿ ಐಟಿಐಯನ್ನು ಪಿಯುಸಿಗೆ ಸಮಾನವಾದ ಅರ್ಹತೆ ಎಂದು ಪರಿಗಣಿಸಿದರೆ, ಐಟಿಐ ಉತ್ತೀರ್ಣರಾದವರು ಉನ್ನತ ವ್ಯಾಸಂಗ ಕೈಗೊಳ್ಳಬಹುದಾಗಿದೆ ಎಂದೂ ಮನವಿ ಮಾಡಿದರು.
ಬಸ್ ಪಾಸ್ ನೀಡಲು ಇರುವ ವಯೋಮಿತಿಯನ್ನು 42 ವರ್ಷಕ್ಕೆ ಹೆಚ್ಚಿಸಬೇಕು, ಲೈನ್ಮೆನ್ ಹುದ್ದೆಗಳಿಗೆ ಐಟಿಐ ಉತ್ತೀರ್ಣರಾದವರನ್ನು ಮಾತ್ರ ಪರಿಗಣಿಸಬೇಕು ಎಂದು ಆಗ್ರಹಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ನಗರ ಕಾರ್ಯದರ್ಶಿ ಸಂಕೇತ ಪಾಟೀಲ, ರಾಕೇಶ ಪಾನಘಂಟಿ, ಅಮಿತ್ ಕಂಪ್ಲೀಕರ್ ನೇತೃತ್ವ ವಹಿಸಿದ್ದರು.