ಶಿಕಾರಿಪುರ (ಶಿವಮೊಗ್ಗ ಜಿಲ್ಲೆ): ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಹಿಡಿದ ಚಿರತೆಯೊಂದು ನಂತರ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ನಿಂಬಿ ಶೇಖರಪ್ಪ ಎಂದಿನಂತೆ ಬೆಳಿಗ್ಗೆ 8 ಗಂಟೆಗೆ ತಮ್ಮ ಜಮೀನಿಗೆ ತೆರಳಿದಾಗ ಬಯಲಿನಲ್ಲಿ ಚಿರತೆ ಮಲಗಿಕೊಂಡಿದ್ದನ್ನು ಕಂಡರು. ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದಾಗ ಸ್ಥಳಕ್ಕೆ ಆಗಮಿಸಿ ಬಲೆಯನ್ನು ಬಳಸಿ ಹಿಡಿದರು. ಆದರೆ ಬಳಿಕ ಸ್ವಲ್ಪ ಸಮಯದಲ್ಲಿ ಅದು ಸಾವನ್ನಪ್ಪಿತು ಎಂದು ಗ್ರಾಮಸ್ಥರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.
ಚಿರತೆ ಅಂದಾಜು 2 ವರ್ಷ ಪ್ರಾಯದ್ದಾಗಿದ್ದು, ದೇಹದಲ್ಲಿ ಯಾವುದೇ ರೀತಿಯ ಗಾಯಗಳು ಕಂಡುಬಂದಿಲ್ಲ. ಕನಿಷ್ಠ 15-20 ದಿನಗಳ ಕಾಲ ಆಹಾರ, ನೀರು ಸೇವಿಸದೆ ಸುಸ್ತಾಗಿ ಸಾವನ್ನಪ್ಪಿರಬಹುದು.
ತೀವ್ರ ಕಾಯಿಲೆಯಿಂದ ಬಳಲುತ್ತಿದ್ದರೂ ಪ್ರಾಣಿಗಳಲ್ಲಿ ಇಂತಹ ತೊಂದರೆಗಳು ಕಂಡುಬರುತ್ತವೆ. ಇದು ಶವ ಪರೀಕ್ಷೆಯ ವರದಿಯಿಂದ ತಿಳಿದುಬರುತ್ತದೆ ಎಂದು ಪಶುವೈದ್ಯಾಧಿಕಾರಿ ಜಯಪ್ಪ ತಿಳಿಸಿದರು.
ಕರಡಿಬೆಟ್ಟ ಅರಣ್ಯ ಪ್ರದೇಶದಲ್ಲಿ ಚಿರತೆ ಕಂಡುಬಂದಿದ್ದು ಈ ಪ್ರದೇಶದಲ್ಲಿ ಹೆಚ್ಚಿನ ಕಾಡುಪ್ರಾಣಿಗಳು ಇವೆ. ಇಲ್ಲಿ ಪ್ರಾಣಿಗಳಿಗೆ ಆಹಾರ, ನೀರಿನ ಕೊರತೆ ಇಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.