ಕೆರೂರ: ಗ್ರಾಮಸ್ಥರ ಮೇಲೆ ಏಕಾ ಏಕಿ ದಾಳಿ ಮಾಡಿ ಗಾಯಗೊಳಿಸಿ ಭೀತಿ ಹುಟ್ಟಿಸಿದ್ದ ಹುಚ್ಚು ರಿಮಂಗವೊಂದನ್ನು ಕೊನೆಗೂ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಸಮೀಪದ ಮತ್ತಿಕಟ್ಟಿ,ಕಡಪಟ್ಟಿಯ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ಈ ಗ್ರಾಮದ ಮನೆಗಳ ಮನೆಗಳ ಮಾಳಿಗೆ ಮೇಲೆ, ಮರದ ಮೇಲೆ ಅರಚುತ್ತಾ ಏಕಾ ಏಕಿ ಜನರ ಮೇಲೆ ದಾಳಿ ಮಾಡುತ್ತಿದ್ದ ಈ ಮಂಗ ತನ್ನನ್ನು ತಾನೂ ಗಾಯೊಗೊಳಿಸಿಕೊಂಡಿತ್ತು.
ಗಾಯ: ಕರಿಮಂಗನ ದಾಳಿಗೆ ತುತ್ತಾಗಿ ಇಲ್ಲಿನ ಫಕೀರಪ್ಪ ಮಾದರ, ಬಸವ್ವ ಹೂಲಿ, ಬೋರವ್ವ ತೋಟ ಗೇರ, ಮುತ್ತವ್ವ ಹೂಲಿ, ಬಸವರಾಜ, ಕರಿಯಪ್ಪ, ಜಾಹೀದಾ ಮುಂತಾದವರು ಗಾಯಗೊಂಡಿದ್ದಾರೆ. ತೀವ್ರ ಗಾಯಗೊಂಡಿದ್ದ ಇನ್ನಿಬ್ಬರು ಸದ್ಯ ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಚೊಳಚಗುಡ್ಡದ ಮಂಗ ಹಿಡಿಯುವಾತ ಬಂದು ಗ್ರಾಮಸ್ಥರ ಸಹಾಯ ಪಡೆದು 2 ದಿನಗಳ ಕಾಲ ಪರಿಶ್ರಮ ವಹಿಸಿ ಮಂಗನನ್ನು ಬಲೆಯನ್ನು ಬಳಸಿ ಸೆರೆ ಹಿಡಿಯುವಲ್ಲಿ ಸಫಲರಾದರು. ಈಗ ಗ್ರಾಮದಲ್ಲಿ ಭೀತಿ ದೂರವಾಗಿ, ನಿರಾಳತೆ ಕಂಡು ಬರುತ್ತಿದೆ.