ಚಿಕ್ಕಮಗಳೂರು: ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೆ ಶುಕ್ರವಾರ ವಿಭಿನ್ನ ಅನುಭವ. ಯಾವುದೇ ಮನರಂಜನೆ ಇಲ್ಲದೆ ~ಏಕಾಂತ ಶಿಕ್ಷೆ~ ಅನುಭವಿಸುತ್ತಿದ್ದ ~ಜೈಲು ಹಕ್ಕಿಗಳಿಗೆ~ ಪೂರ್ವಿ ಸುಗಮ ಸಂಗೀತ ಅಕಾಡೆಮಿಯ ಶಾರದಾ ಗಾನಮಂದಿರದ ಗಾಯಕರು ಸಂಗೀತ ಸುಧೆ ಉಣಬಡಿಸಿದರು.
ಜಿಲ್ಲಾ ಉಪ ಕಾರಾಗೃಹ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ಸಹಯೋಗದಲ್ಲಿ ಜಿಲ್ಲಾ ಉಪ ಕಾರಾಗೃಹದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮವಾಗಿ ~ಸೆರೆಮನೆಯಲ್ಲಿ ಸರಿಗಮ~ ಕಛೇರಿ ನಡೆಯಿತು.
ಜೈಲರ್ ಶಶಿಧರ ಮೂರ್ತಿ ಮಾತನಾಡಿ, ಒಂದು ಕಾಲದಲ್ಲಿ ಹರಿದು ಹಂಚಿ ಹೋಗಿದ್ದ ಕರ್ನಾಟಕ 1956ರಲ್ಲಿ ಮೈಸೂರು ಕನ್ನಡ ಪ್ರಾಂತ್ಯವಾಗಿ ನಂತರ 1972ರಲ್ಲಿ ಕರ್ನಾಟಕ ರಾಜ್ಯ ಎಂದು ಮರು ನಾಮಕರಣಗೊಂಡಿತು.
ಕನ್ನಡನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು ಎಂದು ನುಡಿದರು.ಅನೇಕ ಒಳ್ಳೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸೆರೆಮನೆಯಲ್ಲಿ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಉಪ ಕಾರಾಗೃಹದ ಅಧೀಕ್ಷಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅಧಿಕಾರಿಗಳಿಗೆ ಮನವಿ ಮಾಡಿದರು.
ರಶ್ಮಿ ಮಂಜುನಾಥ್, ಮಲ್ಲಿಗೆ ಸುಧೀರ್, ಎಂ.ಎಸ್.ಸುಧೀರ್ ಮತ್ತು ಸಂಗಡಿಗರು ನಾಡು-ನುಡಿ ಗೀತೆಗಳ ಗಾಯನ ನಡೆಸಿಕೊಟ್ಟರು. ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಸ್.ಚಂದ್ರಪ್ಪ, ರವಿ, ಶಿವಕುಮಾರ್ ಮತ್ತಿತರರು ಇದ್ದರು.