ಪಾಂಡವಪುರ: ವಿದ್ಯುತ್ ಪರಿವರ್ತಕ (ಟಿ.ಸಿ)ಗಳನ್ನು ನಿಗದಿತ ವೇಳೆಗೆ ವಿತರಿಸುತ್ತಿಲ್ಲ ಹಾಗೂ ವಿದ್ಯುತ್ ವ್ಯತ್ಯಯ ಸರಿಪಡಿಸುತ್ತಿಲ್ಲ ಎಂದು ಆರೋಪಿಸಿ, ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ವಿವಿಧ ಗ್ರಾಮಸ್ಥರು ಮಂಗಳವಾರ ಸೆಸ್ಕ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ರೈತರು ಜಮೀನಿನಲ್ಲಿ ಬೆಳೆದಿರುವ ಕಬ್ಬು, ರಾಗಿ, ಹೂವು, ತರಕಾರಿಗಳಿಗೆ ನೀರು ಸರಬರಾಜು ಮಾಡಲು ಟಿ.ಸಿ.ಗಳನ್ನು ಸರಬರಾಜು ಮಾಡುತ್ತಿಲ್ಲ. ಕೆಟ್ಟು ಹೋಗಿರುವ ಟಿಸಿಗಳನ್ನು ರಿಪೇರಿ ಮಾಡಿಕೊಡಲು ಮನವಿ ಸಲ್ಲಿಸಿ ಹಲವಾರು ತಿಂಗಳು ಕಳೆದರೂ, ಸೆಸ್ಕ್ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಇದರಿಂದಾಗಿ ಬೆಳೆಗಳು ಒಣಗಿಹೋಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳಿಗೆ ತರಾಟೆ: ರೈತರ ಸಮಸ್ಯೆಗಳಿಗೆ ಸಮಯಕ್ಕೆ ಸರಿಯಾಗಿ ಸ್ಪಂದಿಸದಿದ್ದರೆ ಅಂತಹ ಅಧಿಕಾರಿಗಳಿಗೆ ದಿಗ್ಬಂಧನ ವಿಧಿಸಿ ತಕ್ಕ ಪಾಠ ಕಲಿಸಬೇಕಾಗುತ್ತದೆ. ಅಧಿಕಾರಿಗಳ ಕಾರ್ಯವೈಖರಿಯ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ಎಚ್ಚರಿಸಿದರು.
ರಾಜೀನಾಮೆಗೆ ಒತ್ತಾಯ: ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರ ಬೇಜಬಾಬ್ದಾರಿತನದಿಂದ ರೈತರು ಮತ್ತು ಸಾರ್ವಜನಿಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ ಶೋಭಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಕಿಡಿಕಾರಿದರು.
ಸೆಸ್ಕ್ ಎಇಇ ಪರಮೇಶ್ವರಪ್ಪ ಮಾತನಾಡಿ, ವಿದ್ಯುತ್ ಟ್ರಾನ್ಸ್ಫಾರ್ಮರ್ ರಿಪೇರಿಗಾಗಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ವಿದ್ಯುತ್ ವ್ಯತ್ಯಯದ ಬಗ್ಗೆ ಮೇಲ್ಮಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಅಂತ್ಯಗೊಂಡಿತು. ಜೆಡಿಎಸ್ ಮುಖಂಡರಾದ ಬೆಟ್ಟಸ್ವಾಮಿ, ಶೇಖರ್, ಸ್ವಾಮೀಗೌಡ, ಶಿವಣ್ಣ, ಲೋಕೇಶ್ ಭಾಗವಹಿಸಿದ್ದರು.