ಕೊಲಂಬೊ (ಪಿಟಿಐ): ಆರಂಭಿಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಎಡಪಾದದ ನೋವಿಗೆ ಒಳಗಾಗಿದ್ದು, ಮುಂಬರುವ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆಡುವುದು ಅನುಮಾನ.
ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ `ಸೂಪರ್ 8~ ಹಂತದ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಮಂಗಳವಾರ ಸೆಹ್ವಾಗ್ ಗಾಯಕ್ಕೆ ಒಳಗಾದರು. ಹಾಗಾಗಿ 14 ದಿನಗಳ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಈ ವಿಷಯವನ್ನು ಭಾರತ ತಂಡದ ಮ್ಯಾನೇಜರ್ ಡಾ.ಆರ್.ಎನ್.ಬಾಬಾ ತಿಳಿಸಿದ್ದಾರೆ.
ಈ ಟೂರ್ನಿಯಲ್ಲಿ ಸೆಹ್ವಾಗ್ ಪ್ರದರ್ಶನ ತೀರಾ ಕಳಪೆಯಾಗಿತ್ತು. ಮೂರು ಪಂದ್ಯಗಳಿಂದ ಅವರು ಒಟ್ಟು 54 ರನ್ ಗಳಿಸಿದ್ದರು.ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಅವರನ್ನು ಕೈಬಿಡಲಾಗಿತ್ತು. ಅಕ್ಟೋಬರ್ 9ರಂದು ದಕ್ಷಿಣ ಆಫ್ರಿಕಾದಲ್ಲಿ ಚಾಂಪಿಯನ್ಸ್ ಲೀಗ್ ಆರಂಭವಾಗಲಿದೆ. ಇದರಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ತಂಡ ಕೂಡ ಆಡುತ್ತಿದೆ. ಗಾಯದ ಕಾರಣ ಕೆಲ ಪಂದ್ಯಗಳಲ್ಲಿ ವೀರೂ ಆಡುವುದು ಅನುಮಾನ.