ನವದೆಹಲಿ (ಪಿಟಿಐ): ಪುರಾಣ ಪ್ರಸಿದ್ಧ ರಾಮ ಸೇತುವೆಗೆ ಹಾನಿ ಮಾಡದೇ ವಿವಾದಾತ್ಮಕ ಸೇತು ಸಮುದ್ರ ಯೋಜನೆಗೆ ಪರ್ಯಾಯ ಮಾರ್ಗ ಹುಡುಕುವುದು ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದು ಉನ್ನತ ಮಟ್ಟದ ಸಮಿತಿ ನೀಡಿರುವ ವರದಿಯನ್ನು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ.
ಇದರಿಂದ ಪರಿಸರಕ್ಕೂ ಹಾನಿಯಾಗುತ್ತದೆ ಎಂದು ಉನ್ನತ ಸಮಿತಿ ಹೇಳಿದೆ. ಸಮಿತಿ ನೀಡಿದ 37 ಪುಟಗಳ ವರದಿಯನ್ನು ಸಾಲಿಸಿಟರ್ ಜನರಲ್ ರೋಹಿಂಟನ್ ನಾರಿಮನ್ ಅವರು ಎಚ್.ಎಲ್.ದತ್ತು ಮತ್ತು ಸಿ.ಕೆ. ಪ್ರಸಾದ್ ಅವರನ್ನು ಒಳಗೊಂಡ ಪೀಠಕ್ಕೆ ಸಲ್ಲಿಸಿದರು.
ವಿವಾದಾತ್ಮಕ ಸೇತುಸಮುದ್ರ ಯೋಜನೆ ಕುರಿತು ವರದಿ ನೀಡುವಂತೆ ಪರಿಸರ ತಜ್ಞ ಆರ್.ಕೆ. ಪಚೌರಿ ಅವರ ನೇತೃತ್ವದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಮಿತಿಯೊಂದನ್ನು ನೇಮಕ ಮಾಡಿದ್ದರು. ಈ ಬಗ್ಗೆ ವಿಚಾರಣೆ ಮಾಡಿದ ಪೀಠ ಯೋಜನೆ ಕುರಿತು ನಿರ್ಧಾರ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಎಂಟು ವಾರಗಳ ಗಡುವು ನೀಡಿದೆ.