ನವದೆಹಲಿ (ಪಿಟಿಐ): ಸೇತು ಸಮುದ್ರಂ ಯೋಜನೆಗೆ ಪೌರಾಣಿಕ ಖ್ಯಾತಿಯ ರಾಮಸೇತುವನ್ನು ಹೊರತು ಪಡಿಸುವ ಯಾವುದೇ ಪರ್ಯಾಯ ಮಾರ್ಗ ಆರ್ಥಿಕವಾಗಿ ಮತ್ತು ಪರಿಸರದ ಹಿನ್ನೆಲೆಯಲ್ಲಿ ಕಾರ್ಯಸಾಧುವಲ್ಲ ಎಂದು ಉನ್ನತ ಮಟ್ಟದ ಸಮಿತಿಯೊಂದು ತನ್ನ ವರದಿಯಲ್ಲಿ ಸಲಹೆ ಮಾಡಿದೆ ಎಂದು ಸರ್ಕಾರವು ಸೋಮವಾರ ಸುಪ್ರೀಂಕೋರ್ಟಿಗೆ ತಿಳಿಸಿತು.
ಏನಿದ್ದರೂ ಕೇಂದ್ರ ಸರ್ಕಾರವು ಖ್ಯಾತ ಪರಿಸರ ತಜ್ಞ ಆರ್.ಕೆ. ಪಚೌರಿ ನೇತ್ವತ್ವದ ಸಮಿತಿಯು ಸಿದ್ಧ ಪಡಿಸಿರುವ ವರದಿಯ ಬಗ್ಗೆ ನಿರ್ಣಯ ಕೈಗೊಳ್ಳುವ ವಿಚಾರವನ್ನು ಕೇಂದ್ರ ಸಂಪುಟವು ಇನ್ನೂ ಪರಿಶೀಲಿಸಬೇಕಾಗಿದೆ ಎಂದು ನ್ಯಾಯಮೂರ್ತಿಗಳಾದ ಎಚ್.ಎಲ್. ದತ್ತು ಮತ್ತು ಸಿ.ಕೆ. ಪ್ರಸಾದ್ ಅವರನ್ನು ಒಳಗೊಂಡ ನ್ಯಾಯಪೀಠಕ್ಕೆ ಸಾಲಿಸಿಟರ್ ಜನರಲ್ ರೊಹಿಂಟನ್ ನಾರಿಮನ್ ತಿಳಿಸಿದರು.
ಯೋಜನೆಯ ಭವಿಷ್ಯದ ಪ್ರಗತಿ ಬಗ್ಗೆ ಎಂಟು ವಾರಗಳಲ್ಲಿ ವಿವರಣೆ ನೀಡುವಂತೆ ಪೀಠವು ಸರ್ಕಾರಕ್ಕೆ ಸೂಚಿಸಿತು.
ಪಚೌರಿ ಸಮಿತಿಯು ಪರ್ಯಾಯ ಮಾರ್ತದ ಬಗ್ಗೆ ಪರಿಶೀಲಿಸಿತು. ಆದರೆ ಅದು ಆರ್ಥಿಕವಾಗಿ ಮತ್ತು ಪರಿಸರದ ಹಿನ್ನೆಲೆಯಲ್ಲಿ ಕಾರ್ಯಸಾಧುವಲ್ಲ ಎಂಬುದಾಗಿ ಅಭಿಪ್ರಾಯಪಟ್ಟಿತು ಎಂದು ನಾರಿಮನ್ ನುಡಿದರು.
ಅಪಾಯ ನಿರ್ವಹಣೆಯ ವಿಚಾರವನ್ನು ಪರಿಶೀಲಿಸಿದ ಬಳಿಕ ತೈಲ ಸೋರಿಕೆಯು ಪರಿಸರದ ಮೇಲೆ ವ್ಯಾಪಕ ದುಷ್ಪರಿಣಾಮ ಬೀರಬಲ್ಲದು ಎಂಬ ನಿರ್ಣಯಕ್ಕೆ ಪಚೌರಿ ಸಮಿತಿಯ ವರದಿ ಹೇಳಿದೆ.
ಮಹತ್ವಾಕಾಂಕ್ಷೆಯ ಸೇತು ಸಮುದ್ರಂ ಯೋಜನೆಯ ವಿರುದ್ಧ ಸಲ್ಲಿಸಲಾದ ವಿವಿಧ ಅರ್ಜಿಗಳ ವಿಚಾರಣೆ ಕಾಲದಲ್ಲಿ ರಾಮಸೇತುವು ನ್ಯಾಯಾಂಗದ ಪರಾಮರ್ಶೆಗೆ ಒಳಗಾಯಿತು. ಈ ಯೋಜನೆಯಿಂದ ಪೌರಾಣಿಕ ಖ್ಯಾತಿಯ ರಾಮಸೇತುವಿಗೆ ಧಕ್ಕೆ ಉಂಟಾಗುತ್ತದೆ ಎಂದು ಈ ಅರ್ಜಿಗಳು ಪ್ರತಿಪಾದಿಸಿದ್ದವು.