ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ಅನ್ವರ ಗ್ರಾಮದ ಹಳ್ಳ ಹಾಗೂ ತಡಬಿಡಿ ಗ್ರಾಮದ ಕಾಲುವೆಗೆ ನಿರ್ಮಿಸಿರುವ ಸೇತುವೆಗಳು ಶಿಥಿಲಗೊಂಡಿವೆ. ಅವುಗಳ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಹಯ್ಯಾಳ(ಬಿ) ಹೋಬಳಿ ಘಟಕವು, ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ಗೆ ಸೋಮವಾರ ಮನವಿ ಸಲ್ಲಿಸಿದೆ.
ಶಹಾಪುರ ತಾಲ್ಲೂಕಿನ ಅನ್ವರ ಗ್ರಾಮದ ಹಳ್ಳಕ್ಕೆ ಕಟ್ಟಿರುವ ಸೇತುವೆಯು ಸುಮಾರು ನೂರು ವರ್ಷ ಹಳೆಯದಾಗಿದೆ. ಈಗ ಅದು ಶಿಥಿಲಾವಸ್ಥೆ ತಲುಪಿದೆ. ಈ ಸೇತುವೆಯ ಮೂಲಕವೇ ಯಾದಗಿರಿ, ಹೈದರಾಬಾದ್, ಸುರಪುರಕ್ಕೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಸೇತುವೆಯು ಕಿರಿದಾಗಿರುವುದರಿಂದ ವಾಹನಗಳು ಎದುರಾದಾಗ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ತಡಬಿಡಿ ಗ್ರಾಮದ ಅನತಿ ದೂರದಲ್ಲಿ ವಿತರಣಾ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯು ಶಿಥಿಲಾವಸ್ಥೆ ತಲುಪಿದೆ. ಇದರಿಂದಾಗಿ ಈ ಭಾಗದಲ್ಲಿ ವಾಹನ ಚಾಲಕರು ಜೀವಭಯದಲ್ಲಿ ವಾಹನ ಓಡಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೀಘ್ರ ಕಾಮಗಾರಿ ಕೈಗೊಳ್ಳದೇ ಇದ್ದಲ್ಲಿ ಗ್ರಾಮಸ್ಥರ ಜೊತೆಗೂಡಿ ಕಚೇರಿಯ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಕರವೇ ಹೋಬಳಿ ಘಟಕದ ಅಧ್ಯಕ್ಷ ರವಿಕುಮಾರ ದೇವರಮನಿ, ಸಾಬಣ್ಣ ಬಬಲಾದ, ವೆಂಕಟೇಶ, ಶಿವಶಂಕರ, ಕಾಸಿಂಪಟೇಲ್, ಮರಲಿಂಗ, ಕುಮಾರ, ಭೀಮು ಪೂಜಾರಿ, ಶಿವು, ಶೇಖಪ್ಪ, ಸದ್ದಾಂ, ಗೋವಿಂದ, ಹಣಮಂತ, ರಾಮು, ರವಿ ತುಮಕೂರ ಎಚ್ಚರಿಸಿದ್ದಾರೆ.