ಕೊಪ್ಪಳ: ನಗರದ ರೈಲ್ವೆ ಗೇಟ್ ನಂ. 62 ಹಾಗೂ 64ರಲ್ಲಿ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಇಲ್ಲಿಗೆ ಭೇಟಿ ನೀಡಿದ ಗುಲ್ಬರ್ಗ ಪ್ರಾದೇಶಿಕ ಆಯುಕ್ತ ಆದಿತ್ಯ ಅಮ್ಲಾನ್ ಬಿಶ್ವಾಸ್ ಪರಿಶೀಲನೆ ನಡೆಸಿದರು.
ಈ ಎರಡೂ ಸ್ಥಳಗಳಿಗೆ ಭೇಟಿ ನೀಡಿದ ಅವರು, ಕಿನ್ನಾಳ ಗೇಟ್ನಲ್ಲಿ (ಗೇಟ್ ನಂ. 64) ಸೇತುವೆ ನಿರ್ಮಾಣಕ್ಕೆ ಯಾವುದೇ ತಾಂತ್ರಿಕ ತೊಡಕುಗಳು ಇಲ್ಲ ಎಂಬುದಾಗಿ ಹೇಳಿದ್ದಾರೆ ಎಂದು ಕಿನ್ನಾಳ ರೈಲ್ವೆ ಗೇಟ್ ಸೇತುವೆ ಹೋರಾಟ ಸಮಿತಿಯ ಮುಖಂಡ ಅಲ್ಲಮ ಪ್ರಭು ಬೆಟ್ಟದೂರು ತಿಳಿಸಿದ್ದಾರೆ.
ತಾವು ಈ ಹಿಂದೆ ಇಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿಯೇ ಇಲ್ಲಿ ಸೇತುವೆ ನಿರ್ಮಾಣದ ಅಗತ್ಯತೆ ಕುರಿತು ವರದಿ ನೀಡಿದ್ದೆ. ಈ ಬಾರಿ ಸಹ ಸದರಿ ಸ್ಥಳದಲ್ಲಿ ಸೇತುವೆ ನಿರ್ಮಾಣದ ಅಗತ್ಯತೆ ಕುರಿತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗೆ ವರದಿ ನೀಡುವುದಾಗಿ ತಿಳಿಸಿದರು ಎಂದೂ ಹೇಳಿದ್ದಾರೆ.
ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಸಮಿತಿ ಮುಖಂಡರಾದ ಎಚ್.ಎಸ್.ಪಾಟೀಲ, ಪ್ರಶಾಂತ ರಾಯ್ಕರ್, ಯಲ್ಲಪ್ಪ ಕಾಟ್ರಳ್ಳಿ, ನಗರಸಭೆ ಸದಸ್ಯ ಜಾಕೀರ್ ಹುಸೇನ್ ಕಿಲ್ಲೇದಾರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.