ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಹೋಬಳಿ ವ್ಯಾಪ್ತಿಯ ಚೆಂಗಾರು- ಹೊಸಪೇಟೆ ಗ್ರಾಮದ ಬಳಿ ಮಾಲತಿ ನದಿಗೆ ಶೀಘ್ರವಾಗಿ ಸೇತುವೆ ನಿರ್ಮಿಸುವಂತೆ ಆಗ್ರಹಿಸಿ ಚೆಂಗಾರು- ಹೊಸಪೇಟೆ ಸೇತುವೆ ಹೋರಾಟ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಈ ಹಿಂದೆ ಸೇತುವೆ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ 2 ಕೋಟಿ ರೂ ಅಂದಾಜು ವೆಚ್ಚದಲ್ಲಿ ಟೆಂಡರ್ ಕರೆದು ನಾಗಾರ್ಜುನ ಕಂಪೆನಿ ಸಂಸ್ಥೆಗೆ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು. ಆದರೆ, ತದನಂತರ ಸರ್ಕಾರ ಅಗತ್ಯ ಅನುದಾನ ನೀಡದ ಪ್ರಯುಕ್ತ ಮೇಲ್ಕಂಡ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸೇತುವೆ ಇಲ್ಲದೆ ಶಾಲಾ ಮಕ್ಕಳಿಗೆ ಹಾಗೂ ಜನರ ದೈನಂದಿನ ಬದುಕಿಗೆ ತೊಂದರೆಯಾಗಿದೆ. ತಕ್ಷಣ ಸೇತುವೆ ಕಾಮಗಾರಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು. ಸಮಿತಿ ಅಧ್ಯಕ್ಷ ನಿರಂಜನಮೂರ್ತಿ, ತಾಲ್ಲೂಕು ಪಂಚಾಯಿತಿ ಸದಸ್ಯ ಹೊಸಹಳ್ಳಿ ಸುಧಾಕರ್, ಮುಖಂಡರಾದ ರಮೇಶ್ ಹೆಗ್ಡೆ, ಬಾಳೇಹಳ್ಳಿ ಪ್ರಭಾಕರ್, ಗೋಪಾಲ್, ಶ್ರೀನಿವಾಸ ಗೌಡ್ರು ಭಾಗಹಿಸಿದ್ದರು.