ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಜನ್ಮದಿನಾಂಕ ವಿವಾದ

Last Updated 20 ಜನವರಿ 2012, 19:30 IST
ಅಕ್ಷರ ಗಾತ್ರ

 ನವದೆಹಲಿ (ಐಎಎನ್‌ಎಸ್, ಪಿಟಿಐ):  ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರ ಜನ್ಮ ದಿನಾಂಕ ವಿವಾದದ ಕುರಿತು ಶುಕ್ರವಾರ ಇಲ್ಲಿ ಖೇದ ವ್ಯಕ್ತಪಡಿಸಿದ ರಕ್ಷಣಾ ಸಚಿವ ಎ.ಕೆ. ಆಂಟನಿ, ಈ ಬಗ್ಗೆ ಸುಪ್ರೀಂ ಕೋರ್ಟಿನ ತೀರ್ಪನ್ನು ಕಾದು ನೋಡುವುದು ಒಳಿತು~ ಎಂದರು.

ನ್ಯಾಷನಲ್ ಕೆಡೆಟ್ ಕಾರ್ಪ್ಸ್‌ನ (ಎನ್‌ಸಿಸಿ) ಗಣರಾಜ್ಯೋತ್ಸವ ಶಿಬಿರದ ಅಂಗವಾಗಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, “ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಲು ಸಂವಿಧಾನಿಕ ವೇದಿಕೆಗಳಿವೆ ಹಾಗೂ ಅದರಂತೆ ಸರ್ಕಾರದ ತೀರ್ಮಾನವನ್ನು ಸುಪ್ರೀಂ        ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ” ಎಂದು ಪ್ರತಿಕ್ರಿಯಿಸಿದರು.

`ದಯವಿಟ್ಟು ಅನಗತ್ಯ ವಿವಾದಗಳಿಂದ ನಮ್ಮನ್ನು ದೂರವಿರಲು ಬಿಡಿ. ಸುಪ್ರೀಂಕೋರ್ಟ್‌ನ ಅಂತಿಮ ತೀರ್ಪು ಹೊರಬೀಳುವವರೆಗೆ ಸುಮ್ಮನಿರಲು ಬಿಡಿ~ ಎಂದು ಅವರು ಮಾಧ್ಯಮಗಳಿಗೆ ಮನವಿ ಮಾಡಿದರು. `ಜನ್ಮ ದಿನಾಂಕ ವಿವಾದವನ್ನು ಸಾರ್ವಜನಿಕ ಚರ್ಚೆ ಅಥವಾ ಬಹಿರಂಗ ವೇದಿಕೆಯಲ್ಲಿ ಅತಿಸೂಕ್ಷ್ಮ ಮಾದರಿಯಲ್ಲಿ ನಿರ್ವಹಿಸಲಾಗದ ಕಾರಣಕ್ಕಾಗಿ ಸರ್ಕಾರವು ತಾಳ್ಮೆ ಮತ್ತು ತಟಸ್ಥ ನಿಲುವು ತಾಳಿದೆ~ ಎಂದು ಉತ್ತರಿಸಿದ ಅವರು, ಆದರೆ `ದುರದೃಷ್ಟವಶಾತ್ ಕೆಲವು ಮಾಧ್ಯಮಗಳು ಇದನ್ನು ಅತಿಸೂಕ್ಷ್ಮವಾಗಿಸಿವೆ~ ಎಂದು ವಿಷಾದಿಸಿದರು.

ಸರ್ಕಾರದ ವಿರುದ್ಧದ ಪಿಐಎಲ್ ವಜಾ: ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರ ಜನ್ಮದಿನಾಂಕವನ್ನು 1951ರ ಮೇ 10 ಎಂಬುದಾಗಿಯೇ ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಯ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

`ಸಂಸ್ಥೆಯೊಂದರ ಹೆಸರಿನಲ್ಲಿ ಸಲ್ಲಿಸಲಾದ ಈ ಪಿಐಎಲ್  ಕಾನೂನಿನಂತೆ ಸಮರ್ಥನೀಯವಲ್ಲ. ಹೀಗಾಗಿ ಈ ರಿಟ್ ಅರ್ಜಿಯನ್ನು ವಜಾಗೊಳಿಸಲಾಗಿದೆ~ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ನೇತೃತ್ವದ ಹಾಗೂ ನ್ಯಾಯಮೂರ್ತಿಗಳಾದ ಎ.ಕೆ. ಪಟ್ನಾಯಕ್ ಮತ್ತು ಸ್ವತಂತ್ರ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ತೀರ್ಪು ನೀಡಿದೆ.

 ಕರ್ನಲ್ ಬಿ.ಎಸ್. ಕೋಶಲ್ ನೇತೃತ್ವದ ಸರ್ಕಾರೇತರ ಸಂಸ್ಥೆಯೊಂದು (ಎನ್‌ಜಿಓ) ಈ ಅರ್ಜಿ ಸಲ್ಲಿಸಿದ್ದು, ಜನ್ಮದಿನಾಂಕ ವಿವಾದದಿಂದ ಸೇನಾ ಮುಖ್ಯಸ್ಥರ ನೈತಿಕತೆಗೆ ಧಕ್ಕೆಯಾಗಿರುವುದಲ್ಲದೆ, ಇದರ ಪರಿಣಾಮ ರಾಷ್ಟ್ರೀಯ ಭದ್ರತೆಯ ಮೇಲಾಗುತ್ತದೆ ಎಂದು ವಾದಿಸಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT