ಜಮ್ಮು (ಐಎಎನ್ಎಸ್): ಜಮ್ಮು ಮತ್ತು ಕಾಶ್ಮೀರದಲ್ಲಿ ಸಶಸ್ತ್ರ ಪಡೆ ವಿಶೇಷ ಅಧಿಕಾರ ಕಾಯ್ದೆ (ಎಎಫ್ಎಸ್ಪಿಎ) ಹಿಂದಕ್ಕೆ ಪಡೆಯುವ ಕುರಿತು ರಕ್ಷಣೆ ಮತ್ತು ಗೃಹ ಸಚಿವಾಲಯಗಳು ಸೂಕ್ತ ನಿರ್ಧಾರ ಕೈಗೊಳ್ಳಲಿವೆ ಎಂದು ಭಾರತ ಸೇನೆಯ ಉತ್ತರ ವಲಯದ ಮುಖ್ಯಸ್ಥ ಲೆಫ್ಟಿನಂಟ್ ಜನರಲ್ ಕೆ.ಟಿ. ಪರ್ನೆಕ್, ರಾಷ್ಟ್ರೀಯ ಭದ್ರತೆಗೆ ಈ ಕಾಯ್ದೆ ಅತ್ಯವಶ್ಯ ಎಂದು ಪುರುಚ್ಚರಿಸಿದ್ದಾರೆ.
ಅಖನೂರನಲ್ಲಿ ಭಾನುವಾರ ಸೇನಾ ದಿನಾಚರಣೆಯ ಪ್ರಯುಕ್ತ ನಡೆದ ಪದಕ ಪ್ರದಾನ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾಯ್ದೆ ಗಲಭೆಕೋರರ ವಿರುದ್ಧ ಕ್ರಮ ಕೈಗೊಳ್ಳಲು ಭದ್ರತಾ ಪಡೆಗಳಿಗೆ ಕಾನೂನಾತ್ಮಕ ಅಧಿಕಾರ ನೀಡುತ್ತದೆ ಎಂದರು.
ಭಯೋತ್ಪಾದನೆ ವಿರುದ್ಧ ಕಳೆದ 21 ವರ್ಷಗಳಿಂದಲೂ ಜಮ್ಮು -ಕಾಶ್ಮೀರ ಹೋರಾಡುತ್ತಿದೆ. ಸೇನೆ ಮತ್ತು ಇತರ ಭದ್ರತಾ ಸಂಸ್ಥೆಗಳಿಗೆ ಈ ಕಾಯ್ದೆಯಿಂದ ಅನುಕೂಲವಾಗಿದೆ ಎಂದೂ ಅವರು ನುಡಿದರು.
ನಿಯಂತ್ರಣ ರೇಖೆಯಿಂದ ಭಯೋತ್ಪಾದಕರ ಬೆದರಿಕೆ ಬರುವ ಮುನ್ನವೇ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೇನೆಗೆ ಈ ಕಾಯ್ದೆ ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ಆದರೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಅವರು ಈ ಕಾಯ್ದೆಯನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸುತ್ತಿದ್ದಾರೆ.