ಮಾಗಡಿ:ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ಗ್ರಾಮೀಣ ಸ್ವಚ್ಛತಾ ಕಾರ್ಯಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದು ಪ್ರಾಂಶುಪಾಲ ಎಸ್.ನಾಗರಾಜು ನುಡಿದರು.
ಅವರು ತಿಪ್ಪಸಂದ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದವತಿಯಿಂದ ಗಂಗೋನಹಳ್ಳಿಯಲ್ಲಿ ನಡೆದ ಶಿಬಿರದಲ್ಲಿ ಮಾತನಾಡಿದರು.
ಲೇಖಕ ಗುಬ್ಬಿಹೊಸಹಳ್ಳಿ ಕೆ. ನರಸಿಂಹಮೂರ್ತಿ ಮಾತನಾಡಿ, ಗ್ರಾಮೀಣ ಜನರಲ್ಲಿ ಅರೋಗ್ಯದ ಬಗ್ಗೆ ಅರಿವು ಮೂಡಿಸಿ, ಮೂಢನಂಬಿಕೆ, ಕಂದಾಚಾರ ನಿರ್ಮೂಲನೆಗೆ ವಿದ್ಯಾರ್ಥಿಗಳು ಸಂಕಲ್ಪ ಮಾಡಬೇಕು. ಗ್ರಾಮೀಣರಲ್ಲಿ ಅಡಗಿರುವ ಮೂಲ ಜನಪದದ ಸೊಗಡನ್ನು ಸಂಗ್ರಹಿಸಲು ಮುಂದಾಗುವಂತೆ ಸಲಹೆ ನೀಡಿದರು.
ಗ್ರಾ.ಪಂ ಅಧ್ಯಕ್ಷೆ ನರಸಮ್ಮ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮೂಡಿಸುತ್ತಿರುವ ಎನ್.ಎಸ್.ಎಸ್. ಶಿಬಿರಗಳು ನಾಡಿನ ಯುವಕರಲ್ಲಿ ಶ್ರಮಪಟ್ಟು ದುಡಿಯುವ ಮಾರ್ಗವನ್ನು ಕಲಿಸುತ್ತಿವೆ~ ಎಂದು ಅಭಿಪ್ರಾಯಪಟ್ಟರು. ಉಪನ್ಯಾಸಕ ಸಿದ್ದಗಂಗಯ್ಯ, ಶಿಬಿರದ ಯೋಜನಾಧಿಕಾರಿ ಮಂಜುನಾಥ್,ಮಾತನಾಡಿದರು.
ಗ್ರಾಮದ ಮುಖಂಡರಾದ ರಾಜಣ್ಣ, ನಾರಾಯಣಪ್ಪ, ರಾಜಮ್ಮ, ಶ್ರೀನಿವಾಸ್, ಉಪನ್ಯಾಸಕರಾದ ಚಂದ್ರಶೇಖರಪ್ಪ, ಗೋವಿಂದಯ್ಯ, ಕುಮಾರ್, ಅಜರ್ ಉಪಸ್ಥಿತರಿದ್ದರು. ಉಪನ್ಯಾಸಕ ದಯಾನಂದ್ ಸ್ವಾಗತಿಸಿ, ರಮೇಶ್ ವಂದಿಸಿದರು. ಶಿಬಿರಾರ್ಥಿಗಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಗಂಗೋನಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.