ಬೆಂಗಳೂರು: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸೋಮವಾರ ಪಟ್ನಾದಲ್ಲಿ ಭೇಟಿ ಮಾಡಿ ನಾಗರಿಕರಿಗೆ ಸೇವೆಗಳ ಖಾತ್ರಿ ಕಾಯ್ದೆ ಕುರಿತು ಚರ್ಚೆ ನಡೆಸಿದರು.
ಎರಡು ದಿನಗಳ ಈ ಪ್ರವಾಸದಲ್ಲಿ ಸಚಿವರು, ಬಿಹಾರ ಸರ್ಕಾರದ ವಿವಿಧ ಇಲಾಖೆಗಳ ಮುಖ್ಯಸ್ಥರ ಜೊತೆ ಮಂಗಳವಾರ ಈ ಕಾಯ್ದೆಯ ಕುರಿತು ಮಾತುಕತೆ ನಡೆಸಲಿದ್ದಾರೆ. ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್ ಮತ್ತು ಕೆಲವು ಹಿರಿಯ ಅಧಿಕಾರಿಗಳು ಸಚಿವರ ಜೊತೆ ತೆರಳಿದ್ದಾರೆ.
ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳು ಕಾಲಮಿತಿಯಲ್ಲಿ ದೊರೆಯುವಂತಾಗಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಇತ್ತೀಚೆಗೆ ನಾಗರಿಕರಿಗೆ ಸೇವೆಗಳ ಖಾತ್ರಿ ಕಾಯ್ದೆ ಜಾರಿ ಮಾಡಿದೆ.