ನವದೆಹಲಿ (ಪಿಟಿಐ): ಯಾವುದೇ ಸರ್ಕಾರಿ ಅಧಿಕಾರಿಯ ವಿರುದ್ಧ ಕ್ರಿಮಿನಲ್ ಪ್ರಕರಣ ನಡೆಯುತ್ತಿದೆ ಎಂಬ ಕಾರಣಕ್ಕಾಗಿ ಆತನ ನಿವೃತ್ತಿ ವೇತನ ಅಥವಾ ಬಡ್ತಿಯನ್ನು ತಡೆಯಬಾರದು ಎಂದು ಕೇಂದ್ರೀಯ ಆಡಳಿತ ನ್ಯಾಯಮಂಡಳಿ ಹೇಳಿದೆ.
ಒಂದು ವೇಳೆ ಆರೋಪಿಯು ಶಿಕ್ಷೆಗೊಳಗಾಗಿದ್ದರೆ ಮಾತ್ರವೇ ಇಂತಹ ಕ್ರಮ ಕೈಗೊಳ್ಳಬಹುದು ಎಂದು ಅದು ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಮೀರಾ ಛಿಬ್ಬರ್ ನೇತೃತ್ವದ ದ್ವಿಸದಸ್ಯ ನ್ಯಾಯಪೀಠ, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈ ಮಹತ್ವದ ಆದೇಶವನ್ನು ನೀಡಿದೆ.
ಕ್ರಿಮಿನಲ್ ಪ್ರಕರಣಗಳು ಬಾಕಿ ಇದ್ದಾಗ ಅಂತಹ ನೌಕರರ ಗ್ರಾಚುಯಿಟಿಯನ್ನು ತೀರ್ಪು ಬರುವ ಮುನ್ನವೇ ಬಿಡುಗಡೆ ಮಾಡುವುದಕ್ಕೆ ಪೀಠ ಸಮ್ಮತಿ ವ್ಯಕ್ತಪಡಿಸಿದೆ.
ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಅಧೀನಕ್ಕೆ ಒಳಪಟ್ಟ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಲಖಿ ರಾಮ್ ಎಂಬುವವರು ಆಗಸ್ಟ್ 2007ರಂದು ಸೇವೆಯಿಂದ ನಿವೃತ್ತರಾಗಿದ್ದರು.
ಇವರು ವೈಯಕ್ತಿಕ ಆಸ್ತಿ ವಿವಾದವೊಂದಕ್ಕೆ ಸಂಬಂಧಿಸಿದಂತೆ 2001ರಲ್ಲಿ ಕ್ರಿಮಿನಲ್ ಪ್ರಕರಣದಲ್ಲಿ ಬಂಧಿತರಾಗಿದ್ದರು ಮತ್ತು 2005ರಲ್ಲಿ ಸೇವೆಗೆ ಪುನಃ ಹಾಜರಾಗಿದ್ದರು.
ಬಂಧನಕ್ಕೊಳಗಾದ ಅವಧಿಯಲ್ಲಿ ಇವರಿಗೆ ದೊರೆಯಬೇಕಾಗಿದ್ದ ಸೌಲಭ್ಯಗಳನ್ನು ತಡೆಹಿಡಿಯಲಾಗಿತ್ತು. ಇದನ್ನು ಪ್ರಶ್ನಿಸಿ ಲಖಿ ರಾಮ್ ನ್ಯಾಯಮಂಡಳಿಯ ಮೊರೆ ಹೋಗಿದ್ದರು.