ಬೆಂಗಳೂರು: ಗುತ್ತಿಗೆ ಆಧಾರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ರಾಜ್ಯ ಗುತ್ತಿಗೆ ಶುಶ್ರೂಷಕರ ಸಂಘದ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿಯನ್ನು ಮುಂದುವರಿಸಿದ್ದಾರೆ.
ಸಂಘದ ಕಾರ್ಯದರ್ಶಿ ಟಿ.ಬಾಲಮುರುಳಿಕೃಷ್ಣ ಅವರು ಮಾತನಾಡಿ `ಹತ್ತು ವರ್ಷದಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ ಆದರೆ ನಮ್ಮ ಸೇವೆಯನ್ನು ಕಾಯಂಗೊಳಿಸಲು ಸರ್ಕಾರ ಮನಸ್ಸು ಮಾಡುತ್ತಿಲ್ಲ. ಏಳೆಂಟು ದಿನಗಳಿಂದ ಧರಣಿ ನಡೆಸುತ್ತಿದ್ದೇವೆ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಂದಿಲ್ಲ. ಸರ್ಕಾರದಿಂದ ಯಾವುದೇ ಭರವಸೆ ಕೂಡ ಸಿಕ್ಕಿಲ್ಲ~ ಎಂದರು.
`ನರ್ಸ್ಗಳು ತಮ್ಮ ಎಳೆ ಮಕ್ಕಳುಗಳೊಂದಿಗೆ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ನಮ್ಮ ಹೋರಾಟಕ್ಕೆ ಒಂದೆರಡು ದಿನಗಳಲ್ಲಿ ಸರ್ಕಾರ ಸ್ಪಂದಿಸಬಹುದು ಎಂದು ಹೋರಾಟ ಮಾಡಲು ನಿರ್ಧರಿಸಿದೆವು. ಆದರೆ ನಮ್ಮ ತಪ್ಪು ಆಲೋಚನೆಯಿಂದ ತಾಯಿ ಮಕ್ಕಳು ನರಳುವಂತಾಗಿದೆ. ಈಗ ಶಾಮಿಯಾನಕ್ಕೆ ಕೊಡಲು ನಮ್ಮ ಬಳಿ ಬಿಡಿಗಾಸು ಇಲ್ಲ~ ಎಂದು ಬಾವುಕರಾದರು.
ಸರ್ಕಾರ ಹೊಸದಾಗಿ 1800 ಹುದ್ದೆಯನ್ನು ಆಯ್ಕೆ ಮಾಡುವ ಯೋಚನೆಯಲ್ಲಿದೆ. ಇದರಿಂದ ನಾವು ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಅಷ್ಟು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ನಮ್ಮ ಸೇವೆಯನ್ನೇ ಕಾಯಂಗೊಳಿಸಬಹುದಿತ್ತು. ನಮ್ಮ ಕೌಟುಂಬಿಕ ಪರಿಸ್ಥಿತಿಯನ್ನು ಮನಗಂಡು ಮಾನವೀಯ ದೃಷ್ಟಿಯಿಂದ ಸರ್ಕಾರ ನಮಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಂಘದ ರಾಜ್ಯ ಸಂಚಾಲಕ ಎಸ್. ನಾಗರಾಜ್ ಮಾತನಾಡಿ ` ಅನಿರ್ದಿಷ್ಟಾವಧಿ ಧರಣಿಯಿಂದ ಈಗಾಗಲೇ ಹಲವಾರು ನೌಕರರು ಅಸ್ವಸ್ಥಗೊಂಡಿದ್ದಾರೆ. ಮಂಗಳವಾರದಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಮುಂದೆ ಆಗಬಹುದಾದ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ~ ಎಂದು ಎಚ್ಚರಿಸಿದರು.