ವಿಜಾಪುರ: ‘ಕೃಷ್ಣಾ ಕಣಿವೆ ಪ್ರದೇಶದ ನೀರಾವರಿ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 417 ಜನ ಎಂಜಿನಿಯರರ ನೇಮಕಾತಿಯನ್ನು ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿದೆ. ರಾಜ್ಯ ಸರ್ಕಾರ ವಿಶೇಷ ಕಾನೂನು ರೂಪಿಸಿ ಅವರನ್ನು ಸೇವೆಯಲ್ಲಿ ಮುಂದುವರೆಸಬೇಕು’ ಎಂದು ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಆಗ್ರಹಿಸಿದರು.
‘ಡಿಸೆಂಬರ್ 2013ರ ಅಂತ್ಯಕ್ಕೆ ಇವರನ್ನು ಸೇವೆಯಿಂದ ಬಿಡುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅಷ್ಟರೊಳಗೆ ಸರ್ಕಾರ ಸೂಕ್ತ ಕಾನೂನು ರೂಪಿಸಬೇಕು. ಸರ್ಕಾರದ ಮೇಲೆ ಒತ್ತಡ ತರಲು ಬೆಂಗಳೂರಿನಲ್ಲಿ ಧರಣಿ ನಡೆಸಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಹಳೆ ಮೈಸೂರು ಭಾಗದ ಎಂಜಿನಿಯರರು ಕೃಷ್ಣಾ ಕಣಿವೆ ನೀರಾವರಿ ಯೋಜನೆಗಳಲ್ಲಿ ಕೆಲಸ ಮಾಡಲು ಆಸಕ್ತಿ ತೋರಲಿಲ್ಲ. ಹೀಗಾಗಿ ಈ ಭಾಗದ ಎಂಜಿನಿಯರರನ್ನೇ ನೇಮಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದೆವು. ಸರ್ಕಾರ 1993–94ರಲ್ಲಿ ಈ ಭಾಗದ 440 ಜನ ಎಂಜಿನಿಯರರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿತ್ತು. 2002ರಲ್ಲಿ ಅವರ ಸೇವೆಯನ್ನು ಕಾಯಂ ಮಾಡಿತ್ತು. ಅವರಲ್ಲಿ 67 ಜನರಿಗೆ ಬಡ್ತಿಯನ್ನೂ ನೀಡಿದೆ’ ಎಂದರು.
‘ಈ ನೇಮಕಾತಿ ವಿರೋಧಿಸಿ ಹಳೆ ಮೈಸೂರು ಭಾಗದವರು ಕೋರ್ಟ್ ಮೊರೆ ಹೋಗಿದ್ದರು. ನೇಮಕಾತಿ ರಾಜ್ಯ ಮಟ್ಟದಲ್ಲಿ ನಡೆಯಬೇಕು. ಪ್ರಾದೇಶಿಕ ಮಟ್ಟದಲ್ಲಿ ನಡೆದ ಈ ನೇಮಕಾತಿ ಅಸಿಂಧು ಎಂದು ಹೈಕೋರ್ಟ್ ನೀಡಿದ ತೀರ್ಪನ್ನೇ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಹೀಗಾಗಿ ಇವರೆಲ್ಲ ಅತಂತ್ರರಾಗಿದ್ದಾರೆ’ ಎಂದು ಹೇಳಿದರು.
‘440 ಜನರಲ್ಲಿ 23 ಜನ ಮರಣ ಹೊಂದಿದ್ದಾರೆ. ಅವರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಬೇಕು ಮತ್ತು ಉಳಿದವರ ಸೇವೆ ಮುಂದುವರೆಸಲು ವಿಶೇಷ ಕಾನೂನು ಜಾರಿಗೊಳಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ. ಮಾಜಿ ಮುಖ್ಯಮಂತ್ರಿ ಧರಂಸಿಂಗ್ ನೇತೃತ್ವದಲ್ಲಿ ಮುಂದಿನ ತಿಂಗಳು ಬೆಂಗಳೂರಿಗೆ ನಿಯೋಗ ಕರೆದೊಯ್ಯಲಿದ್ದೇವೆ’ ಎಂದರು. ಮನೀಷ್ ಜಾಜು, ವಕ್ತಾರ ನಾಗಲಿಂಗಯ್ಯ ಮಠಪತಿ, ಕಿರಣ ಮಸೂತಿ, ಸಿ.ಎಂ. ಕೊಪ್ಪದ, ಒಡೆಯರ ಪತ್ರಿಕಾಗೋಷ್ಠಿಯಲ್ಲಿದ್ದರು.