ಬೆಂಗಳೂರು: ತಿರುಮಲ ಕನ್ಸ್ಟ್ರಕ್ಷನ್ ಕಂಪೆನಿಯು ಆಯೋಜಿಸಿರುವ ‘ದಿ ತಿರುಮಲ ಕನ್ಸ್ಟ್ರಕ್ಷನ್ ಗ್ರೇಟ್ ಮಲ್ನಾಡ್ ಚಾಲೆಂಜ್–೨೦೧೩’ ಸೈಕಲ್ ರ್ಯಾಲಿಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನಗರದಲ್ಲಿ ಶುಕ್ರವಾರ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಚ್.ಆರ್. ಭಾರದ್ವಾಜ್, ‘ಪ್ರಕೃತಿ ಮತ್ತು ಹವಾಗುಣ ಎಂಬುದು ಜನ ಸಮುದಾಯದೊಂದಿಗೆ ಸದಾ ಬೆಸೆದುಕೊಂಡಿರುತ್ತದೆ. ಕೆಲಸದ ಒತ್ತಡದಲ್ಲಿರುವ ನಾಗರಿಕರು, ರ್ಯಾಲಿಯಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ. ಅಲ್ಲದೇ, ಒಂದು ವಿಷಯದ ಬಗ್ಗೆ ಜನರಿಗೆ ಅರಿವು ಮೂಡಿಸುವ ಸುಲಭ ಮಾರ್ಗ ಇದಾಗಿದೆ’ ಎಂದು ಅಭಿಪ್ರಾಯಪಟ್ಟರು.
‘ಅಕ್ಟೋಬರ್ 26ರಂದು ಆರಂಭಗೊಳ್ಳುವ ಈ ಸೈಕಲ್ ರ್ಯಾಲಿ 850 ಕಿಲೋ ಮೀಟರ್ ದೂರ ಕ್ರಮಿಸಲಿದೆ. ಮಡಿಕೇರಿಯಿಂದ ಹೊರಟು ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡದ ಮೂಲಕ ಸಾಗಿ ಜೋಗ್ಫಾಲ್ಸ್ನಲ್ಲಿ ಅಂತಿಮಗೊಳಿಸಲಾಗುವುದು. ಒಂಬತ್ತು ದಿನಗಳ ಕಾಲ ನಡೆಯಲಿರುವ ರ್ಯಾಲಿಯು ನೂರು ಗ್ರಾಮಗಳ ಮೂಲಕ ಹಾದು ಹೋಗಲಿದೆ’ ಎಂದು ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಆರ್. ಮೋಹನ್ ಹೇಳಿದರು.