ಕೆಜಿಎಫ್: ಸೈನಿಕರು ಮತ್ತು ಕುಟುಂಬ ವರ್ಗದವರಿಗೆ ಸರ್ಕಾರ ಅನೇಕ ಯೋಜನೆಗಳನ್ನು ಮಂಜೂರು ಮಾಡಲಾಗಿದೆ ಎಂದು ಬ್ರಿಗೇಡಿಯರ್ ಅರವಿಂದದತ್ತ ಹೇಳಿದರು.
ಬೆಮಲ್ನಗರದಲ್ಲಿ ಭಾನುವಾರ ನಡೆದ ಮಾಜಿ ಸೈನಿಕರ ರ್ಯಾಲಿಯಲ್ಲಿ ಮಾತನಾಡಿದ ಅವರು, ಸೈನಿಕರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮಟ್ಟದಲ್ಲೇ ಪರಿಹಾರ ದೊರಕುತ್ತಿದೆ. ಸೇನೆಯ ವಿವಿಧ ಇಲಾಖೆಗಳಲ್ಲಿ ದೊರಕುವ ಮಾಹಿತಿ ಅನೇಕ ಸೈನಿಕ ಕುಟುಂಬಗಳಿಗೆ ತಿಳಿದಿಲ್ಲ. ಸೈನಿಕರು ಸೇವೆ ಸಲ್ಲಿಸಿದ ಸೇನೆಯ ಇಲಾಖೆ ಮುಖ್ಯಸ್ಥರನ್ನು ಭೇಟಿ ಮಾಡಿ ಮಾಹಿತಿ ಪಡೆಯಬೇಕು ಎಂದರು.
ಕರ್ನಲ್ ಶಶಿಕುಮಾರ್ ಮಾತನಾಡಿ, 2006ರಲ್ಲಿ ಸೈನಿಕರ ಪಿಂಚಣಿ ಪರಿಷ್ಕರಣೆಗೊಂಡಿದೆ. ಇನ್ನೂ ಪ್ರಯೋಜನ ಪಡೆಯದವರು ಸಂಬಂಧಪಟ್ಟ ಬ್ಯಾಂಕ್ ಮಾನೇಜರ್ಗಳನ್ನು ಭೇಟಿ ಮಾಡಿ ದಾಖಲೆ ಸಲ್ಲಿಸಬೇಕು ಎಂದರು.
ಕೋಲಾರ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಣ್ಣಯ್ಯ ಮಾತನಾಡಿ, ಜಿಲ್ಲೆಯಲ್ಲಿ 230 ಸೈನಿಕರ ವಿಧವೆ ಪತ್ನಿಯರು ಇದ್ದಾರೆ. ಎರಡನೇ ಮಹಾಯುದ್ದದಲ್ಲಿ ಪಾಲ್ಗೊಂಡ ಸೈನಿಕರ ವಿಧವೆಯರು ಸಹ ಇದ್ದಾರೆ. ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಹತ್ತಿರದಲ್ಲೇ ನೀಡಲು ಸೈನಿಕರ ಕಲ್ಯಾಣ ಸೇವೆ ವಿಭಾಗ ಸಹಾಯ ಮಾಡಬೇಕು ಎಂದರು.
ಕೆಜಿಎಫ್ನ ಚಿನ್ನಕೋಟೆ ಗ್ರಾಮದಲ್ಲಿ ಮಾಜಿ ಸೈನಿಕರಿಗಾಗಿ ನೀಡಲಾದ ಜಮೀನು ಒತ್ತುವರಿ ಯಾಗಿದೆ. ತೆರವಿಗಾಗಿ ಸಂಘ ನೀಡಿದ ಮನವಿಯನ್ನು ಜಿಲ್ಲಾಧಿಕಾರಿಗಳು ಪುರಸ್ಕರಿಸಬೇಕು ಎಂದು ಅವರು ತಿಳಿಸಿದರು. ಅಧಿಕಾರಿಗಳಾದ ಅರವಿಂದ್, ಎಲ್ಸಿಎಸ್ ನಾಯ್ಡು, ಶ್ರೀನಿವಾಸ್ ಹಾಜರಿದ್ದರು.