ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನೈಡ್‌ ಹಂತಕ ಮೋಹನ ಕುಮಾರ್‌ಗೆ ಗಲ್ಲು

Last Updated 21 ಡಿಸೆಂಬರ್ 2013, 13:57 IST
ಅಕ್ಷರ ಗಾತ್ರ

ಮಂಗಳೂರು: ಸೈನೈಡ್‌ ತಿನ್ನಿಸಿ ಮಹಿಳೆಯರ ಸರಣಿ ಕೊಲೆ ನಡೆಸಿರುವ ಪ್ರಕರಣಗಳನ್ನು ಅತ್ಯಂತ ಅಪರೂಪದ ಪ್ರಕರಣ ಎಂದು ಪರಿಗಣಿಸಿರುವ ಇಲ್ಲಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ, ಮೂರು ಪ್ರಕರಣಗಳಲ್ಲಿ ಅಪರಾಧಿ ಮೋಹನ್‌ಕುಮಾರ್‌ಗೆ ಗಲ್ಲು ಶಿಕ್ಷೆ ವಿಧಿಸಿದೆ. 

ಬಂಟ್ವಾಳ ತಾಲ್ಲೂಕಿನ ಬರಿಮಾರು ಗ್ರಾಮದ ಅನಿತಾ (22) ಹಾಗೂ ವಾಮದ ಪದವು ಗ್ರಾಮದ ಕೋಡಂಬೆಟ್ಟುವಿನ ಲೀಲಾ (32) ಹಾಗೂ ಸುಳ್ಯ ತಾಲ್ಲೂಕಿನ ಪೆರ್ವಾಜೆ ಗ್ರಾಮದ ಸುನಂದಾ (28) ಕೊಲೆ ಪ್ರಕರಣಗಳಲ್ಲಿ ನ್ಯಾಯಾಧೀಶ ಬಿ.ಕೆ.ನಾಯಿಕ ಅವರು ಶನಿವಾರ, ಬಂಟ್ವಾಳ ತಾಲ್ಲೂಕಿನ ಕನ್ಯಾನದ ಶಿಕ್ಷಕ ಮೋಹನ ಕುಮಾರ್‌ಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ನೀಡಿದರು. ಆತನ ವಿರುದ್ಧ ದಾಖಲಾಗಿರುವ ಇನ್ನುಳಿದ 17 ಮಹಿಳೆಯರ ಕೊಲೆ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.

ಮೋಹನ ಸರ್ಕಾರಿ ನೌಕರಿಯಲ್ಲಿದ್ದೇನೆ ಎಂದು ಹೇಳಿಕೊಂಡು, ಸುಳ್ಳು ಹೆಸರಿನಲ್ಲಿ ಪರಿಚಯಿಸಿಕೊಂಡು ಬಡ ಕುಟುಂಬದ ಮಹಿಳೆಯರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ಅವರನ್ನು ಮದುವೆಯಾಗುವುದಾಗಿ ನಂಬಿಸಿ ದೂರದ ಊರಿಗೆ ಕರೆದೊಯ್ದು ಅಲ್ಲಿನ ವಸತಿಗೃಹಗಳಲ್ಲಿ ಅವರ ಜತೆ ಬಲಾತ್ಕಾರವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಬಳಿಕ ಗರ್ಭಧಾರಣೆಯನ್ನು ತಡೆಯುವ ಔಷಧಿ ಎಂದು ಸೈನೈಡ್‌ ನೀಡಿ ಕೊಲೆ ಮಾಡುತ್ತಿದ್ದ.

ಎಲ್ಲಾ ಪ್ರಕರಣಗಳಲ್ಲೂ ಮಹಿಳೆಗೆ ಸೈನೈಡ್‌ ತಿನ್ನಿಸಲು ಬಳಸುತ್ತಿದ್ದುದು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳನ್ನೇ. ಬಸ್‌ ನಿಲ್ದಾಣದ ಶೌಚಾಲಯದಲ್ಲಿ ಮಹಿಳೆ ಸೈನೈಡ್‌ ಸೇವಿಸಿ ಮೃತಪಟ್ಟಿದ್ದು ಖಚಿತಪಟ್ಟ ಬಳಿಕ ವಸತಿಗೃಹಕ್ಕೆ ತೆರಳಿ ಆ ಮಹಿಳೆಯ ಚಿನ್ನಾಭರಣಗಳೊಂದಿಗೆ ಪರಾರಿಯಾಗುತ್ತಿದ್ದ. ಶಿಕ್ಷೆಯಾದ ಮೂರು ಪ್ರಕರಣಗಳಲ್ಲೂ ಮೋಹನ ಅತ್ಯಾಚಾರ ಮತ್ತು ಕೊಲೆ ನಡೆಸಿರುವುದು ಸಾಂದರ್ಭಿಕ ಸಾಕ್ಷ್ಯಗಳಿಂದ ಸಾಬೀತಾಗಿತ್ತು.

ಅನಿತಾ ಕೊಲೆ ಪ್ರಕರಣದಲ್ಲಿ ಮೋಹನನಿಗೆ 125 ಪುಟಗಳ ಸುದೀರ್ಘ ಆದೇಶವನ್ನು ಪ್ರಕಟಿಸಿದ ನ್ಯಾಯಾಧೀಶರು, ಆತನಿಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 366 (ಮಹಿಳೆಯ ಅಪಹರಣ) ಅಡಿ 5 ವರ್ಷ ಕಠಿಣ ಸಜೆ ಹಾಗೂ ₨ 5ಸಾವಿರ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 1 ವರ್ಷ ಸಾದಾ ಶಿಕ್ಷೆ,  ಸೆಕ್ಷನ್‌ 376ರ (ಅತ್ಯಾಚಾರ) ಅಡಿ 8 ವರ್ಷ ಕಠಿಣ ಸಜೆ ಮತ್ತು ₨ 5 ಸಾವಿರ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 1 ವರ್ಷ ಸಾದಾ ಸಜೆ, ಸೆಕ್ಷನ್‌ 302ರ (ಕೊಲೆ) ಅಡಿ ಮರಣ ದಂಡನೆ ಹಾಗೂ ₨ 5 ಸಾವಿರ ದಂಡ,

ಸೆಕ್ಷನ್‌ 392ರ (ಚಿನ್ನಾಭರಣ ದೋಚಿದ್ದು) ಅಡಿ 5 ವರ್ಷ ಕಠಿಣ ಸಜೆ ಹಾಗೂ ₨ 5 ಸಾವಿರ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 1 ವರ್ಷ ಸಾದಾ ಸಜೆ, ಸೆಕ್ಷನ್‌ 394ರ (ಚಿನ್ನಾಭರಣ ದೋಚಲು ಸೈನೈಡ್‌ ನೀಡಿ ಘಾಸಿಗೊಳಿಸಿದ್ದು) ಅಡಿ 10 ವರ್ಷ ಕಠಿಣ ಸಜೆ ಮತ್ತು ₨ 10 ಸಾವಿರ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 2 ವರ್ಷ ಸಾದಾ ಸಜೆ, ಸೆಕ್ಷನ್‌ 328ರ ಅಡಿ (ವಿಷವುಣಿಸಿ ಘಾಸಿಗೊಳಿಸಿದ್ದು), 3 ವರ್ಷ ಕಠಿಣ ಸಜೆ ಮತ್ತು ₨ 1 ಸಾವಿರ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 6 ತಿಂಗಳು ಸಾದಾ ಸಜೆ, ಸೆಕ್ಷನ್‌ 465ರ (ನಕಲಿ ದಾಖಲೆ ಸೃಷ್ಟಿ) ಪ್ರಕಾರ 1 ವರ್ಷ ಕಠಿಣ ಸಜೆ,

ಸೆಕ್ಷನ್‌ 468ರ (ನಕಲಿ ದಾಖಲೆ ಸೃಷ್ಟಿಸಿ ವಂಚನೆ ) ಪ್ರಕಾರ 3 ವರ್ಷ ಕಠಿಣ ಸಜೆ ಹಾಗೂ ₨ 2 ಸಾವಿರ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 6 ತಿಂಗಳು ಸಾದಾ ಸಜೆ, ಸೆಕ್ಷನ್‌ 417ರ (ವಂಚನೆ) ಪ್ರಕಾರ 3 ವರ್ಷ ಕಠಿಣ ಸಜೆ, ಮತ್ತು ₨ 2 ಸಾವಿರ ದಂಡ, ದಂಡ ಪಾವತಿಗೆ ತಪ್ಪಿದಲ್ಲಿ 6 ತಿಂಗಳು ಸಾದಾ ಸಜೆ, ಸೆಕ್ಷನ್‌ 201ರ (ಸಾಕ್ಷ್ಯ ನಾಶ) ಪ್ರಕಾರ 3 ವರ್ಷ ಕಠಿಣ ಸಜೆ ಹಾಗೂ ₨ 3 ಸಾವಿರ ದಂಡ, ದಂಡ ಪಾವತಿಗೆ ತಪ್ಪಿದಲ್ಲಿ 6 ತಿಂಗಳು ಸಾದಾ ಸಜೆ ವಿಧಿಸಿದರು. ಲೀಲಾ ಹಾಗೂ ಸುನಂದಾ ಕೊಲೆ ಪ್ರಕರಣದಲ್ಲೂ ಆರೋಪಿಗೆ ಐಪಿಸಿ ಸೆಕ್ಷನ್‌ 366, 376, 302, 394, 328, 417 ಹಾಗೂ 201ರ ಪ್ರಕಾರ ಇದೇ ಪ್ರಮಾಣದ ಶಿಕ್ಷೆಯನ್ನು ಪ್ರತ್ಯೇಕವಾಗಿ ವಿಧಿಸಿದರು.

‘ಮೂರು ಪ್ರಕರಣಗಳಲ್ಲೂ ಐಪಿಸಿ ಸೆಕ್ಷನ್‌ 302ರ ಪ್ರಕಾರ ವಿಧಿಸಿದ ಗಲ್ಲುಶಿಕ್ಷೆ ಹೈಕೋರ್ಟ್‌ ಅನುಮತಿಯ ಬಳಿಕ ಜಾರಿಗೊಳ್ಳಲಿದೆ. ಪ್ರತಿ ಪ್ರಕರಣದಲ್ಲೂ ದಂಡದ ಮೊತ್ತವನ್ನು ಸಂತ್ರಸ್ತ ಕುಟುಂಬಗಳಿಗೆ ಪಾವತಿಸಬೇಕು’ ಎಂದು ನ್ಯಾಯಾಧೀಶರು ಆದೇಶಿಸಿದರು.
ಬಚನ್‌ ಸಿಂಗ್‌ ಮತ್ತು ಪಂಜಾಬ್‌ ಸರ್ಕಾರದ ನಡುವಿನ ಪ್ರಕರಣದಲ್ಲಿ (1980) ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು, ಉಮೇಶ್‌ ಮತ್ತು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ನಡುವಿನ ಪ್ರಕರಣದ ತೀರ್ಪು ಸಹಿತ ಒಟ್ಟು ಐದು ವಿವಿಧ ಪ್ರಕರಣಗಳಲ್ಲಿ ಉನ್ನತ ನ್ಯಾಯಾಲಯಗಳ ತೀರ್ಪನ್ನು ನ್ಯಾಯಾಧೀಶರು ಉಲ್ಲೇಖಿಸಿದರು.

‘ವೃದ್ಧ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳು ನನ್ನನ್ನೇ ಅವಲಂಬಿಸಿರುವುದರಿಂದ ಶಿಕ್ಷೆಯಲ್ಲಿ ರಿಯಾಯಿತಿ ನೀಡುವಂತೆ ಅಪರಾಧಿಯು ಮನವಿ ಮಾಡಿಕೊಂಡಿದ್ದಾನೆ. ಆದರೆ, ಆತ ಕರುಣೆಗೆ ಅರ್ಹನಲ್ಲ’ ಎಂದರು. 

‘ಪೊಲೀಸರು ಪ್ರಸ್ತುತ ಪಡಿಸಿದ ಆಭರಣಗಳನ್ನು ಸಾಲ ಮಾಡಿ ಖರೀದಿಸಿದ್ದೆ ಎಂದು ವಾದಿಸುವ ಮೂಲಕ ಅಪರಾಧಿಯು ನ್ಯಾಯಾಲಯದ ದಾರಿ ತಪ್ಪಿಸಲು ಪ್ರಯತ್ನಿಸಿದ್ದಾನೆ. ತನ್ನನ್ನೇ ನಂಬಿ ಬಂದ ಮಹಿಳೆಯರ ಅತ್ಯಾಚಾರ ನಡೆಸಿದ್ದಲ್ಲದೇ, ಕಣ್ಮುಂದೆಯೇ ಅವರು ನರಳಿ ಸತ್ತ ಬಳಿಕವೂ ಅವರ ಆಭರಣಗಳನ್ನು ದೋಚಿದ್ದಾನೆ. ಆತ ಮತ್ತೆ ಮತ್ತೆ ನಿರ್ದಯವಾಗಿ ಕೊಲೆಗಳನ್ನು ಮುಂದುವರಿಸಿದ್ದಾನೆ.

ಈ ಕೊಲೆಗಳೆಲ್ಲವೂ ಪೂರ್ವ ನಿಯೋಜಿತವೇ ಹೊರತು ಪರಿಸ್ಥಿತಿಯ ಒತ್ತಡದಿಂದ ಸಂಭವಿಸಿದವುಗಳಲ್ಲ. ಆತನ ದುಷ್ಕೃತ್ಯಗಳೆಲ್ಲವೂ ಸಮಾಜದ ಸ್ವಾಸ್ಥ್ಯದ ಮೇಲೆ ಗಂಭೀರ ಪರಿಣಾಮ ಬೀರುವಂತಹವು. ಇಂತಹ ಕೃತ್ಯಗಳಲ್ಲಿ ಅಪರಾಧಿಗೆ ರಿಯಾಯಿತಿ ತೋರಿಸಿದರೆ ನ್ಯಾಯಾಲಯದ ಮೇಲಿನ ನಂಬಿಕೆಗೂ ಕುತ್ತು ಬರಬಹುದು. ಹಾಗಾಗಿ ಆತನಿಗೆ ಮರಣ ದಂಡನೆಯೇ ಸೂಕ್ತ’ ಎಂದು ನ್ಯಾಯಾಧೀಶ ಬಿ.ಕೆ.ನಾಯಿಕ ಅವರು ಅಭಿಪ್ರಾಯಪಟ್ಟರು.

ಒಂದೇ ದಿನ ಮೂರು ಗಲ್ಲು ಶಿಕ್ಷೆ
‘ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಒಂದೇ ದಿನ, ಒಬ್ಬ ಆರೋಪಿಗೆ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ವಿಧಿಸಿರುವುದು ಇದೇ ಮೊದಲು. ಒಬ್ಬನೇ ವ್ಯಕ್ತಿ ವಿರುದ್ಧ 20 ಪ್ರತ್ಯೇಕ ಕೊಲೆಗಳನ್ನು ಕೊಲೆ ನಡೆಸಿರುವ ಪ್ರಕರಣಗಳೂ ಇಲ್ಲ’ ಎಂದು ಸಂತ್ರಸ್ತರ ಪರ ವಾದ ಮಂಡಿಸಿದ್ದ ವಿಶೇಷ ಸರ್ಕಾರಿ ವಕೀಲ ಚೆಯ್ಯಬ್ಬ ಬ್ಯಾರಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಆದೇಶ ಸಮಾಜಕ್ಕೆ ಪಾಠ 
‘ಮೋಹನ ಕೊಂದಿರುವುದು ತನ್ನನ್ನೇ ನಂಬಿ ಬಂದ ಮಹಿಳೆಯರನ್ನು. ಮೋಹನನಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ನ್ಯಾಯಾಲಯ ಇಂತಹ  ಕೃತ್ಯ ಎಸಗುವವರಿಗೆ ಕಠಿಣ ಸಂದೇಶ ರವಾನಿಸಿದೆ. ಇದೊಂದು ಚಾರಿತ್ರಿಕ ತೀರ್ಪು’ ಎಂದು ಚೆಯ್ಯಬ್ಬ ಬ್ಯಾರಿ ಅವರು ಅಭಿಪ್ರಾಯಪಟ್ಟರು.

ವಿಚಲಿತನಾಗದ ಅಪರಾಧಿ
ನ್ಯಾಯಾಧೀಶರು ಗಲ್ಲು ಶಿಕ್ಷೆ ಪ್ರಕಟಿಸುವಾಗಲೂ ಅಪರಾಧಿ ಮೋಹನ ಸ್ವಲ್ಪವೂ ವಿಚಲಿತನಾಗಲಿಲ್ಲ. ‘ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ಯೋಚಿಸುತ್ತಿದ್ದೇನೆ’ ಎಂದು ಆತ ಮಾಧ್ಯಮದವರಿಗೂ ನಗುಮೊಗದಿಂದಲೇ ಉತ್ತರಿಸಿದ. ಆತನ ಕುಟುಂಬಸ್ಥರು ಯಾರೂ ಆದೇಶ ಪ್ರಕಟವಾಗುವಾಗ ಬಂದಿರಲಿಲ್ಲ.

ಪೆನ್ನಿನ ನಿಬ್‌ ಮುರಿದ ನ್ಯಾಯಾಧೀಶರು
ಅಪರಾಧಿಗೆ ಗಲ್ಲುಶಿಕ್ಷೆ ಪ್ರಕಟಿಸಿದ ಬಳಿ ನ್ಯಾಯಾಧೀಶ ಬಿ.ಕೆ.ನಾಯಿಕ ಅವರು ಪೆನ್ನಿನ ನಿಬ್‌ ಮುರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT